ಉದಯವಾಹಿನಿ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರು ಗಾಯಕಿ ಹಾಗೂ ಕೊಳಲು ವಾದಕಿ ವಾರಿಜಾಶ್ರೀ ಅವರ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಸ್ವತಃ ರಘು ದೀಕ್ಷಿತ್ ಅವರೇ ಈ ಬಗ್ಗೆ ಹೇಳಿಕೊಂಡಿದ್ದಾರೆ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಎರಡೂ ಮನೆಯವರ ಒಪ್ಪಿಗೆ ಮೇರೆಗೆ ವಿವಾಹ ಬಂಧನಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ತಿಂಗಳ ಕೊನೆಯಲ್ಲಿ ಇಬ್ಬರು ಮದುವೆ ಆಗಲಿದ್ದಾರೆ.
ನನ್ನ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತದೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ನನ್ನ ಜೀವನದಲ್ಲಿ ನಾನು ನಿರೀಕ್ಷೆ ಮಾಡಿರದ ಆಕಸ್ಮಿಕ ತಿರುವು ಇದು. ನನ್ನ ಮತ್ತು ವಾರಿಜಾಶ್ರೀ ಅವರ ಪ್ರೀತಿಗೆ ವಾರಿಜಾಶ್ರೀ ಅವರ ಪೋಷಕರು ಒಪ್ಪಿಗೆ ಸೂಚಿಸಿದ್ದಾರೆ. ಸದ್ಯ ನಮ್ಮ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಹೊರಟಿದ್ದೇವೆ ಎಂದಿದ್ದಾರೆ ರಘು ದೀಕ್ಷಿತ್.
ವಾರಿಜಾಶ್ರೀ ಹಾಗೂ ರಘು ದೀಕ್ಷಿತ್ ಇಬ್ಬರು `ಸಾಕು ಇನ್ನೂ ಸಾಕು’ ಎನ್ನುವ ಆಲ್ಬಂಗೆ ಕೆಲಸ ಮಾಡುವ ಮೂಲಕ ಪರಸ್ಪರ ಪರಿಚಯವಾದರು. ಅಲ್ಲಿಂದ ಮುಂದೆ ಇಬ್ಬರು ಸ್ನೇಹಿತರಾಗಿ ಸಾಕಷ್ಟು ವಿಡಿಯೋ ಸಾಂಗ್ ಆಲ್ಬಂಗಳಿಗೆ ಕೆಲಸ ಮಾಡಿದ್ದಾರೆ. ಈ ಮೊದಲು ರಘು ದೀಕ್ಷಿತ್ ಅವರು ನೃತ್ಯ ಕಲಾವಿದೆ ಮಯೂರಿ ಅವರನ್ನು ಮದುವೆಯಾಗಿದ್ದರು. ಕೆಲವು ವರ್ಷಗಳ ಹಿಂದೆ ಮಯೂರಿ ಅವರೊಂದಿಗೆ ವಿಚ್ಛೇದನ ಪಡೆದುಕೊಂಡಿದ್ದ ರಘು ದೀಕ್ಷಿತ್ ಇದೀಗ ವಾರಿಜಾಕ್ಷಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!