ಉದಯವಾಹಿನಿ, ನವದೆಹಲಿ: ಮಕ್ಕಳಲ್ಲಿ ಪದೇಪದೆ ಹೊಟ್ಟೆ ನೋವು, ಮಲಬದ್ಧತೆ, ಹಸಿವಿಲ್ಲದಿರುವುದು ಅಥವಾ ಅಜೀರ್ಣದಂಥ ಸಮಸ್ಯೆಗಳು ಕಂಡುಬಂದರೆ ವೈದ್ಯರು ಮೊದಲು ಔಷಧಿ ಕೊಡುವುದು ಜಂತು ಹುಳು ನಿರ್ಮೂಲನೆಗೆ. ವಿಷಯವೇನೆಂದರೆ, ಮಕ್ಕಳಿಗೆ ಮಾತ್ರವಲ್ಲ ದೊಡ್ಡವರನ್ನೂ ಜಂತು ಹುಳುವಿನ ಬಾಧೆ ಕಾಡಬಹುದು. ಕಲುಷಿತ ನೀರು ಮತ್ತು ಆಹಾರದಿಂದ ಅವರಿಗೂ ಕರುಳಿನಲ್ಲಿ ಹುಳುಗಳು ಸೇರಿ, ಆರೋಗ್ಯವನ್ನು ಅಲ್ಲಾಡಿಸ ಬಹುದು. ಔಷಧಿಯಿಂದ ಈ ಸಮಸ್ಯೆಗೆ ಪರಿಹಾರವಂತೂ ಖಂಡಿತಾ ಇದೆ.ತೂಕ ಇಳಿಕೆ: ನಮಗಾಗಿ ನಾವು ತಿಂದಿದ್ದೆಲ್ಲವನ್ನೂ ಹೊಟ್ಟೆ ಯಲ್ಲಿರುವ ಹುಳುಗಳ ಪಾಲೇ ಆಗುವುದರಿಂದ, ದೇಹಕ್ಕೆ ಹೆಚ್ಚಿನ ಪೋಷಕಾಂಶಗಳು ದೊರೆಯದೆ ಸೊರಗುವುದು ನಿಶ್ಚಿತ. ಆಹಾರ ಕ್ರಮ ಎಂದಿನಂತೆಯೇ ಇದ್ದು, ಅನಾರೋಗ್ಯದಂಥ ಬೇರಾವುದೇ ಕಾರಣವಿಲ್ಲದೆಯೇ ತೂಕ ಇಳಿಯುತ್ತಿದ್ದರೆ ವೈದ್ಯರನ್ನು ಕಾಣುವುದು ಅಗತ್ಯ. ಹೊಟ್ಟೆಯಲ್ಲಿ ಜಂತು ಹುಳುವಿನ ಕಾಟ ಇರಬಹುದು.
ಮಲಬದ್ಧತೆ: ಆಹಾರದಲ್ಲಿ ಸಾಕಷ್ಟು ನಾರಿನಂಶ ಇದ್ದು, ನೀರು ಸಾಕಷ್ಟು ಕುಡಿಯುತ್ತಿದ್ದರೂ ಮಲಬದ್ಧತೆ ಆಗುತ್ತಿದೆಯೇ? ಹಾಗಾದರೆ ಹೊಟ್ಟೆಯ ಹುಳುಗಳಿಂದಾಗಿ ಉರಿಯೂತ ಆಗಿರಬಹುದು, ಇದರಿಂದ ನೀರು-ನಾರುಗಳು ಸಾಕಷ್ಟಿದ್ದರೂ, ಅವುಗಳನ್ನು ಹೀರಿಕೊಳ್ಳುವುದಕ್ಕೆ ಜೀರ್ಣಾಂಗಕ್ಕೆ ಸಮಸ್ಯೆ ಯಾಗುತ್ತದೆ. ಇದರಿಂದ ಅಜೀರ್ಣ, ಹೊಟ್ಟೆಯುಬ್ಬರ, ಅಸಿಡಿಟಿ, ವಾಕರಿಕೆ ಇಂಥವೆಲ್ಲಾ ಕಿರಕಿರಿಗಳು ಆಗುತ್ತಿರಬಹುದು
