ಉದಯವಾಹಿನಿ, ಉತ್ತರಪ್ರದೇಶ: ಸೋದರಳಿಯನೊಂದಿಗೆ ಅನೈತಿಕ ಸಂಬಂಧ ಕೊನೆಗೊಂಡ ಬಳಿಕ ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ ಮಣಿಕಟ್ಟು ಸೀಳಿಕೊಂಡು ಆತ್ಮಹತ್ಯೆ ಯತ್ನ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದೆ. ಪತಿಯ ಸೋದರಳಿಯ, ತನಗಿಂತ 15 ವರ್ಷ ಕಿರಿಯವನಾದ ಅಲೋಕ್ ಮಿಶ್ರಾ ಜೊತೆ ಮಹಿಳೆ ಸಂಬಂಧ ಹೊಂದಿದ್ದಳು. ಆದರೆ ಆತ ಸಂಬಂಧ ಮುರಿದುಕೊಂಡ ಬಳಿಕ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಅವಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ದೆಹಲಿಯ ಪೂಜಾ ಮಿಶ್ರಾ ಎಂಬ ಮಹಿಳೆ ವಿವಾಹಿತಳಾಗಿದ್ದು ಏಳು ಮತ್ತು ಆರು ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ಈಕೆ ತನ್ನ ಪತಿಯ ಸೋದರಳಿಯ, ತನಗಿಂತ 15 ವರ್ಷ ಕಿರಿಯವನಾದ ಅಲೋಕ್ ಮಿಶ್ರಾ ಜೊತೆ ಪ್ರಣಯ ಸಂಬಂಧ ಬೆಳೆಸಿಕೊಂಡಿದ್ದಳು. ಪೂಜಾಳ ಕುಟುಂಬ ಆತನನ್ನು ಮನೆಯಲ್ಲಿ ಕೆಲಸ ಮಾಡಲು ಆಹ್ವಾನಿಸಿದ ಬಳಿಕ ಅವರಿಬ್ಬರ ನಡುವೆ ಸಂಬಂಧ ಬೆಳೆದಿದೆ ಎನ್ನಲಾಗಿದೆ.
ಇವರಿಬ್ಬರ ಸಂಬಂಧದ ಬಗ್ಗೆ ಪತಿಗೆ ತಿಳಿದಾಗ ಅವರು ಅಲೋಕ್ನನ್ನು ದೂರ ಕಳುಹಿಸಿದರು. ಇದರಿಂದ ಹಿಂಜರಿಯದ ಪೂಜಾ ತನ್ನ ಮಕ್ಕಳನ್ನು ಬಿಟ್ಟು ಬರೇಲಿಗೆ ತೆರಳಿದ್ದಳು. ಅಲ್ಲಿ ಅಲೋಕ್ ಜೊತೆ ಸುಮಾರು ಏಳು ತಿಂಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದಳು. ಬಳಿಕ ಇಬ್ಬರ ನಡುವೆ ಗಲಾಟೆಗಳು ಪ್ರಾರಂಭವಾಗಿದೆ. ಅಲೋಕ್ ಬಳಿಕ ಸೀತಾಪುರದಲ್ಲಿರುವ ತನ್ನ ಸ್ವಂತ ಹಳ್ಳಿಗೆ ಮರಳಿದ್ದನು. ಆತನನ್ನು ಹುಡುಕಿಕೊಂಡು ಪೂಜಾ ಗ್ರಾಮಕ್ಕೆ ಬಂದಾಗ ಪೊಲೀಸರು ಆಕೆ ಮತ್ತು ಅಲೋಕ್ ಇಬ್ಬರನ್ನೂ ಠಾಣೆಗೆ ಕರೆಸಿ ವಿವಾದವನ್ನು ಪರಿಹರಿಸಲು ಸಹಾಯ ಮಾಡಿದರು. ಈ ನಡುವೆ ಪೂಜಾ ತಾನು ಇನ್ನು ಪ್ರಿಯಕರನೊಂದಿಗೆ ಸಂಬಂಧವನ್ನು ಮುಂದುವರಿಸಲು ಬಯಸುವುದಿಲ್ಲ ಎಂದು ಹೇಳಿ ಠಾಣೆಯೊಳಗೆ ಬ್ಲೇಡ್ ತೆಗೆದುಕೊಂಡು ತನ್ನ ಮಣಿಕಟ್ಟನ್ನು ಸೀಳಿಕೊಂಡಿದ್ದಾಳೆ. ಕೂಡಲೇ ಪೊಲೀಸರು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆಕೆಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
