ಉದಯವಾಹಿನಿ, ನವದೆಹಲಿ: ಭಾರತ ತಂಡದಿಂದ ಕಡೆಣಿಸಿರುವ ಹಿರಿಯ ವೇಗಿ ಮೊಹಮ್ಮದ್ ಶಮಿ ಅವರ ಪರವಾಗಿ ಮಾತನಾಡಿದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಬಿಸಿಸಿಐ ಆಯ್ಕೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುವ ವಿಚಾರದಲ್ಲಿ ಶಮಿ ಜೊತೆಗಿನ ಸಂವಹನವನ್ನು ಪ್ರಶ್ನಿಸಿದ್ದಾರೆ. ದೇಶಿ ಕ್ರಿಕೆಟ್ನಲ್ಲಿ ಬಂಗಾಳ ಪರ ಮೊಹಮ್ಮದ್ ಶಮಿ ಸ್ಥಿರ ಪ್ರದರ್ಶನ ನೀಡುತ್ತಿದ್ದರೂ, ಆಯ್ಕೆದಾರರು ಅನುಭವಿ ಬೌಲರ್ ಜೊತೆ ಪಾರದರ್ಶಕತೆ ಮತ್ತು ಮೂಲಭೂತ ಸಂವಹನವನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ತಿವಾರಿ ದೂರಿದ್ದಾರೆ.
2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ಗಳನ್ನು ಕಬಳಿಸಿದ್ದ ಮೊಹಮ್ಮದ್ ಶಮಿ, ಸರಣಿ ಗಾಯಗಳಿಂದ ಚೇತರಿಸಿಕೊಂಡ ನಂತರ ದೀರ್ಘಕಾಲದವರೆಗೆ ತಂಡದಿಂದ ಹೊರಗುಳಿದಿದ್ದರು. ತಿಂಗಳುಗಳ ಕಾಲ ಪುನಶ್ಚೇತನ ಕಾರ್ಯದಲ್ಲಿ ತೊಡಗಿದ ನಂತರ, ಅವರು ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಭಾರತ ತಂಡಕ್ಕೆ ಮರಳಿದ್ದರು. ಅಲ್ಲಿ ಭಾರತ ಟ್ರೋಫಿಯನ್ನು ಎತ್ತಿಹಿಡಿದಿತ್ತು. ಆದಾಗ್ಯೂ, ಅವರು ದೀರ್ಘಾವಧಿ ರಾಷ್ಟ್ರೀಯ ತಂಡದಲ್ಲಿ ಉಳಿದಿಲ್ಲ. ಅಂದಿನಿಂದ ಶಮಿ ಭಾರತ ತಂಡಕ್ಕೆ ಮರಳಲು ಹೆಣಗಾಡುತ್ತಿದ್ದಾರೆ. ಇಂಡಿಯಾ ಟುಡೆ ಜೊತೆ ಮಾತನಾಡಿದ ಮನೋಜ್ ತಿವಾರಿ, “ತಂಡದ ವಲಯದಲ್ಲಿ ನಂಬಿಕೆ ಮತ್ತು ತಿಳುವಳಿಕೆಯ ಕೊರತೆ ಕಾಣುತ್ತಿದೆ. ಮೊಹಮ್ಮದ್ ಶಮಿ ಬಂಗಾಳ ಪರ ನಿರಂತರವಾಗಿ ವಿಕೆಟ್ ಕಬಳಿಸಿದ್ದಾರೆ, ಆದರೆ ಅವರನ್ನು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಅಥವಾ ಏಕದಿನ ಸರಣಿಗಳಿ ಆಯ್ಕೆ ಮಾಡಲಾಗಿಲ್ಲ” ಎಂದು ಅವರು ಆರೋಪ ಮಾಡಿದ್ದಾರೆ.
