ಉದಯವಾಹಿನಿ, ಕನ್ನಡದಲ್ಲಿ ಸಾಕಷ್ಟು ಅದ್ದೂರಿ ಬಜೆಟ್ ಸಿನಿಮಾಗಳು ಬಂದಿವೆ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ರವಿಚಂದ್ರನ್ ಅವರು ಆಗಿನ ಕಾಲದಲ್ಲಿ ಸಾಕಷ್ಟು ದೊಡ್ಡ ಸಿನಿಮಾಗಳನ್ನು ಮಾಡಿದ್ದರು. ರಿಲೀಸ್ ಆಗಿದ್ದು ಕನ್ನಡದಲ್ಲಿ ಮಾತ್ರ. ಪರಭಾಷೆಯವರಿಗೆ ಇದರ ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲ. ತೆಲುಗು ಸಂದರ್ಶಕರೊಬ್ಬರು ಕನ್ನಡ ಸಿನಿಮಾ ಬಜೆಟ್ ಬಗ್ಗೆ ಪ್ರಶ್ನೆ ಮಾಡಿದ್ದರು. ಇದಕ್ಕೆ ಉಪೇಂದ್ರ ಮುಟ್ಟಿನೋಡಿಕೊಳ್ಳುವ ಉತ್ತರ ಕೊಟ್ಟಿದ್ದಾರೆ.ರಾಮ್ ಪೋತಿನೇನಿ ನಟನೆಯ ‘ಆಂಧ್ರ ಕಿಂಗ್ ತಾಲೂಕ’ ಸಿನಿಮಾದಲ್ಲಿ ಉಪೇಂದ್ರ ಕೂಡ ನಟಿಸಿದ್ದಾರೆ. ಇದು ತೆಲುಗು ಸಿನಿಮಾ.
ಈ ಚಿತ್ರದ ಸಂದರ್ಶನ ನೀಡಲು ಅವರು ಹೈದರಾಬಾದ್ಗೆ ತೆರಳಿದ್ದರು. ಈ ವೇಳೆ ಕನ್ನಡ ಚಿತ್ರರಂಗವನ್ನು ಕೀಳಾಗಿ ನೋಡುವ ಪ್ರಯತ್ನ ನಡೆದಿದೆ. ಇದಕ್ಕೆ ಉಪೇಂದ್ರ ಅವರು ಅವಕಾಶ ಕೊಡಲೇ ಇಲ್ಲ. ‘ಒಂದು ಕಾಲದಲ್ಲಿ ತೆಲುಗು ಹೀರೋಗೆ ಕೊಡುವ ಸಂಭಾವನೆಯಲ್ಲಿ ಕನ್ನಡ ಸಿನಿಮಾ ಮಾಡಬಹುದಿತ್ತಲ್ಲ’ ಎಂದು ಸಂದರ್ಶಕರು ಉಪೇಂದ್ರ ಅವರಿಗೆ ಕೇಳಿದರು. ಇದನ್ನು ಉಪೇಂದ್ರ ಒಪ್ಪಲೇ ಇಲ್ಲ. ‘ಈಗಿನ ಜನರೇಶನ್ ಆ ರೀತಿ ಹೇಳುತ್ತದೆ. ಆಗಲೂ ಸೆನ್ಸೇಷನ್ ಸಿನಿಮಾಗಳನ್ನು ಮಾಡಲಾಗಿದೆ. ಸನಾದಿ ಅಪ್ಪಣ್ಣ ರೀತಿಯ ಸಿನಿಮಾಗಳು ಇವೆ. ಪುಟ್ಟಣ್ಣ ಕಣಗಾಲ್, ವಿಷ್ಣುವರ್ಧನ್ ರಾಜ್ಕುಮಾರ್ ಸಿನಿಮಾಗಳು ಬ್ಲಾಕ್ಬಸ್ಟರ್ ಆಗಿವೆ. ‘ಅವೆಲ್ಲ ಬ್ಲಾಕ್ಬಸ್ಟರ್ ಆಗಿದೆ ನಿಜ, ಆದರೆ ಬಜೆಟ್ ಹೆಚ್ಚು ಹಾಕುತ್ತಾ ಇರಲಿಲ್ಲ ಅಲ್ಲವೇ’ ಎಂದು ಸಂದರ್ಶಕರು ಕೌಂಟರ್ ಕೊಡೋಕೆ ಬಂದರು. ಆಗ ಉಪೇಂದ್ರ, ‘ಸಿಂಗಾಪುರದಲ್ಲಿ ರಾಜಾ ಕುಳ್ಳ ಹೆಸರಿನ ಸಿನಿಮಾ ಬಂತು. ಆಗಿನ ಕಾಲದಲ್ಲೇ ಸಿಂಗಾಪುರಕ್ಕೆ ತೆರಳಿ ಶೂಟ್ ಮಾಡಲಾಗಿತ್ತು. ಈ ವಿಷಯ ಗೊತ್ತಿಲ್ಲ ಅಷ್ಟೇ. ಈಗಿನ ಸಮಯಕ್ಕೆ ಇದೇ ದೊಡ್ಡದು ಎನಿಸುತ್ತದೆ. ಆ ಸಮಯದಲ್ಲಿಯೂ ದೊಡ್ಡ ಬಜೆಟ್ ಸಿನಿಮಾ ಇತ್ತು’ ಎಂದಿದ್ದಾರೆ ಉಪೇಂದ್ರ.
