ಉದಯವಾಹಿನಿ, ವಿಶ್ವದ ಶ್ರೇಷ್ಠ ಫುಟ್‌ಬಾಲ್‌ ಆಟಗಾರರಲ್ಲಿ ಒಬ್ಬರಾದ ಅರ್ಜೆಂಟೀನಾದ ಲಿಯೋನೆಲ್‌ ಮೆಸ್ಸಿ ಮುಂಬೈನಲ್ಲಿ ಭಾನುವಾರ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು ಈ ವೇಳೆ ದಿಗ್ಗಜ ಕ್ರಿಕೆಟ್‌ ಆಟಗಾರ ಸಚಿನ್‌ ತೆಂಡೂಲ್ಕರ್‌ ಭಾರತದ ಫುಟ್‌ಬಾಲ್‌ ತಾರೆ ಸುನಿಲ್‌ ಚೆಟ್ರಿ, ನಟ ಅಜಯ್ ದೇವಗನ್, ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಹಾಜರಿದ್ದರು. ಸಚಿನ್‌ ತೆಂಡೂಲ್ಕರ್‌ ಅವರು ಮೆಸ್ಸಿಗೆ 2011ರ ಏಕದಿನ ವಿಶ್ವಕಪ್‌ ವಿಜೇತ ತಂಡದ ಜೆರ್ಸಿಯನ್ನು ಸ್ಮರಣಿಕೆಯಾಗಿ ನೀಡಿದರು. ಬಳಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಮೆಸ್ಸಿಯನ್ನುದ್ದೇಶಿಸಿ ಮಾತನಾಡಿದ ಸಚಿನ್, ನಾನು ಇಲ್ಲಿ ಕೆಲವು ಅದ್ಭುತ ಕ್ಷಣಗಳನ್ನು ಕಳೆದಿದ್ದೇನೆ. ನಾವು ಮುಂಬೈ ಅನ್ನು ಕನಸುಗಳ ನಗರ ಎಂದು ಕರೆಯುತ್ತೇವೆ, ಹಲವಾರು ಕನಸುಗಳು ಈ ಸ್ಥಳದಲ್ಲಿ ಅಂತಿಮ ಗೆರೆಯನ್ನು ಕಂಡಿವೆ. ಇಂದು, ದಿಗ್ಗಜ ಫುಟ್ಬಾಲ್‌ ಆಟಗಾರರನ್ನು ಮುಂಬೈ ಕಾಣುವುದು ಮುಂಬೈಕರ್‌ಗಳು ಮತ್ತು ಭಾರತಕ್ಕೆ ಸುವರ್ಣ ಕ್ಷಣವಾಗಿದೆ ಎಂದರು.

“ಎಲ್ಲಾ ಮುಂಬೈಕರ್‌ಗಳ ಪರವಾಗಿ, ಮೆಸ್ಸಿ, ಉರುಗ್ವೆಯ ಲೂಯಿಸ್ ಸುವಾರೆಜ್ ಮತ್ತು ರೊಡ್ರಿಗೋ ಡಿ ಪಾಲ್ ಅವರಿಗೆ ಮತ್ತು ಅವರ ಕುಟುಂಬಕ್ಕೆ ಉತ್ತಮ ಆರೋಗ್ಯವನ್ನು ಹಾರೈಸುತ್ತೇನೆ. ಪ್ರೋತ್ಸಾಹಿಸಿದ್ದಕ್ಕಾಗಿ ಮತ್ತೊಮ್ಮೆ ಧನ್ಯವಾದಗಳು. ಫುಟ್ಬಾಲ್ ನಾವೆಲ್ಲರೂ ಆಶಿಸುವ ಎತ್ತರವನ್ನು ತಲುಪುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಸಚಿನ್‌ ಹೇಳಿದರು.

ಪ್ರದರ್ಶನ ಪಂದ್ಯದಲ್ಲಿ ಮಿತ್ರಾ ಸ್ಟಾರ್‌ ತಂಡದ ಪರ ಆಟವಾಡಿರುವ ಸುನಿಲ್‌ ಚೆಟ್ರಿ , ಗೋಲು ಗಳಿಸುವ ಮೂಲಕ ಗಮನ ಸೆಳೆದರು. ಪಂದ್ಯಕ್ಕೂ ಮುನ್ನ ಮೆಸ್ಸಿ ಜೊತೆ ಮೈದಾನದಲ್ಲಿ ಮಾತುಕತೆಯನ್ನು ಕೂಡ ನಡೆಸಿದ್ದಾರೆ. ಲಿಯೊನೆಲ್‌ ಮೆಸ್ಸಿ ಅವರನ್ನು ಭೇಟಿಯಾಗಲು ಸುನಿಲ್‌ ಚೆಟ್ರಿ ನಿರಾಕರಿಸಿದ್ದಾರೆ ಎನ್ನುವ ವಂದತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು. ಆದರೆ ಎಲ್ಲ ವಂದತಿಗಳಿಗೂ ಭಾನುವಾರ ತೆರೆ ಬಿತ್ತು.

ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಮೆಸ್ಸಿ ಅವರನ್ನು ಭೇಟಿಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಉಭಯ ಆಟಗಾರರು ಭೇಟಿಯಾಗಿಲ್ಲ. ಸೋಮವಾರ ಮೆಸ್ಸಿ ದೆಹಲಿಗೆ ಭೇಟಿ ನೀಡಲಿದ್ದಾರೆ. ಪ್ರಧಾನಿ ಮೋದಿ, ಕ್ರಿಕೆಟಿಗರನ್ನು ಭೇಟಿಯಾಗುವ ನಿರೀಕ್ಷೆ ಇದೆ.

Leave a Reply

Your email address will not be published. Required fields are marked *

error: Content is protected !!