ಉಯವಾಹಿನಿ, ವಡೋದರ: ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯ ಆರಂಭಕ್ಕೆ ಇನ್ನು ಕೇವಲ ಒಂದೇ ಒಂದು ದಿನ ಮಾತ್ರ ಬಾಕಿ ಇದೆ. ಮೊದಲನೇ ಏಕದಿನ ಪಂದ್ಯ ಜನವರಿ 11 ರಂದು ಇಲ್ಲಿನ ಬಿಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎರಡೂ ತಂಡಗಳು ಸಜ್ಜಾಗುತ್ತಿವೆ. ಇದರ ನಡುವೆ ಭಾರತ ತಂಡ ಯಾವ ಪ್ಲೇಯಿಂಗ್ XI ಅನ್ನು ಆಡಿಸಬಹುದು ಎಂಬ ಬಗ್ಗೆ ತೀವ್ರ ಕುತೂಹಲವಿದೆ. ಅದರಂತೆ ಭಾರತ ತಂಡದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಅವರು ತವರು ತಂಡದ ಪ್ಲೇಯಿಂಗ್ XI ಅನ್ನು ಆರಿಸಿದ್ದು, ಕೆಎಲ್ ರಾಹುಲ್ ಬದಲು ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಸ್ಥಾನಕ್ಕೆ ರಿಷಭ್ ಪಂತ್ ಅವರನ್ನು ಆರಿಸಿದ್ದಾರೆ.
2024ರ ಆಗಸ್ಟ್ನಿಂದ ಇಲ್ಲಿಯವರೆಗೂ ರಿಷಭ್ ಪಂತ್ ಭಾರತ ಏಕದಿನ ತಂಡದಲ್ಲಿ ಆಡದೆ ಇರುವುದು ನಿಜಕ್ಕೂ ಅಚ್ಚರಿ ಸಂಗತಿ. ಆದರೆ, ಭಾರತ ಏಕದಿನ ತಂಡಕ್ಕೆ ಕೆಎಲ್ ರಾಹುಲ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿದ್ದಾರೆ. ಆದರೆ, ಕಿವೀಸ್ ಎದುರಿನ ಈ ಏಕದಿನ ಸರಣಿಯಲ್ಲಿ ಕೆಎಲ್ ರಾಹುಲ್ಗೆ ವಿಶ್ರಾಂತಿ ನೀಡಿ, ರಿಷಭ್ ಪಂತ್ಗೆ ಅವಕಾಶ ನೀಡಿ ಎಂದು ಇರ್ಫಾನ್ ಪಠಾಣ್ ಸಲಹೆಯನ್ನು ನೀಡಿದ್ದಾರೆ. ವಿಭಿನ್ನ ಗಾಯಗಳ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಅಲಭ್ಯರಾಗಿದ್ದ ಶುಭಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಅವರು ಭಾರತ ಏಕದಿನ ತಂಡಕ್ಕೆ ಮರಳಿದ್ದಾರೆ. ತಮ್ಮ ಪ್ಲೇಯಿಂಗ್ Xiನಲ್ಲಿ ಈ ಇಬ್ಬರಿಗೂ ಪಠಾಣ್ ಅವಕಾಶವನ್ನು ನೀಡಿದ್ದಾರೆ. ಆಲ್ರೌಂಡರ್ಗಳಾಗಿ ರವೀಂದ್ರ ಜಡೇಜಾ ಹಾಗೂ ನಿತೀಶ್ ಕುಮಾರ್ ರೆಡ್ಡಿ ಹಾಗೂ ವಾಷಿಂಗ್ಟನ್ ಸುಂದರ್ಗೆ ಚಾನ್ಸ್ ಕೊಟ್ಟಿದ್ದಾರೆ.
ಇನ್ನು ಸೀಮ್ ಬೌಲಿಂಗ್ ವಿಭಾಗಕ್ಕೆ ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್ ಹಾಗೂ ಮೊಹಮ್ಮದ್ ಸಿರಾಜ್ಗೆ ಇರ್ಫಾನ್ ಪಠಾಣ್ ಅವಕಾಶವನ್ನು ನೀಡಿದ್ದಾರೆ. ಒಂದು ವೇಳೆ ಹೆಚ್ಚಿನ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್ ಅವರನ್ನು ಆಡಿಸಬೇಕೆಂದು ಟೀಮ್ ಮ್ಯಾನೇಜ್ಮೆಂಟ್ ಬಯಸಿದರೆ, ಹರ್ಷಿತ್ ಅಥವಾ ಅರ್ಷದೀಪ್ ಅವರಲ್ಲಿ ಒಬ್ಬರನ್ನು ಕೈ ಬಿಡಬೇಕೆಂದು 2007ರ ಟಿ20 ವಿಶ್ವಕಪ್ ವಿಜೇತ ಆಲ್ರೌಂಡರ್ ತಿಳಿಸಿದ್ದಾರೆ.
