ಉದಯವಾಹಿನಿ , : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅದ್ಭುತ ಪ್ರದರ್ಶನದೊಂದಿಗೆ ಅಜೇಯವಾಗಿ ಸಾಗುತ್ತಿದೆ. ಇತ್ತೀಚಿನ ಪಂದ್ಯದಲ್ಲಿ ಗುಜರಾತ್ ತಂಡವನ್ನು ಮಣಿಸಿದ ಆರ್‌ಸಿಬಿ, ಈ ಆವೃತ್ತಿಯಲ್ಲಿ ಸತತ ಐದನೇ ಜಯ ದಾಖಲಿಸುವ ಮೂಲಕ ಪ್ಲೇಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಇದರಿಂದ ಡಬ್ಲ್ಯೂಪಿಎಲ್ ಇತಿಹಾಸದಲ್ಲೇ ನಿರಂತರ ಐದು ಪಂದ್ಯಗಳನ್ನು ಗೆದ್ದ ಮೊದಲ ತಂಡ ಎಂಬ ಗೌರವಕ್ಕೂ ಆರ್‌ಸಿಬಿ ಪಾತ್ರವಾಯಿತು.
ಈ ಪಂದ್ಯದಲ್ಲಿ ಆರ್‌ಸಿಬಿ ಪರ ಚೊಚ್ಚಲ ಪಂದ್ಯ ಆಡಿದ ಗೌತಮಿ ನಾಯಕ್ ಮಿಂಚಿದರೆ, ಸಯಾಲಿ ಸತ್ಪರೆ ಹಾಗೂ ನಾಡಿನ್ ಡಿ ಕ್ಲರ್ಕ್ ಅವರ ಶಿಸ್ತುಬದ್ಧ ಬೌಲಿಂಗ್ ದಾಳಿ ಗುಜರಾತ್ ತಂಡದ ಗೆಲುವಿನ ಕನಸನ್ನು ಭಗ್ನಗೊಳಿಸಿತು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಮತೋಲನ ಪ್ರದರ್ಶನ ಆರ್‌ಸಿಬಿ ಗೆಲುವಿಗೆ ಕಾರಣವಾಯಿತು.
ಪಂದ್ಯದ ಬಳಿಕ ಮಾತನಾಡಿದ ನಾಯಕಿ ಸ್ಮೃತಿ ಮಂಧಾನ, ತಂಡದ ಯಶಸ್ಸಿನ ಹಿಂದಿನ ಯೋಚನೆಗಳನ್ನು ಹಂಚಿಕೊಂಡಿದ್ದಾರೆ. ಮುಂದಿನ ದಿನಗಳ ಬಗ್ಗೆ ಹೆಚ್ಚು ಯೋಚಿಸದೆ, ಪ್ರತಿದಿನ ಮಾಡುವ ಸಣ್ಣ ಸಣ್ಣ ಕೆಲಸಗಳ ಮೇಲೆ ಗಮನ ಹರಿಸುವುದೇ ನಮ್ಮ ಶಕ್ತಿ ಎಂದು ಅವರು ಹೇಳಿದರು. ಪ್ರತಿಯೊಂದು ಪಂದ್ಯವನ್ನು ಪಾಠವಾಗಿ ತೆಗೆದುಕೊಂಡು, ಗೆಲುವಿನ ನಡುವೆಯೂ ತಪ್ಪುಗಳನ್ನು ಗುರುತಿಸುವ ಮನೋಭಾವವೇ ತಂಡವನ್ನು ಮುಂದೆ ಕೊಂಡೊಯ್ಯುತ್ತಿದೆ ಎಂದು ವಿವರಿಸಿದರು. ಜೊತೆಗೆ ಬೆಂಬಲ ಸಿಬ್ಬಂದಿಯ ಸಕಾರಾತ್ಮಕ ವಾತಾವರಣಕ್ಕೂ ಅವರು ಪ್ರಶಂಸೆ ಸಲ್ಲಿಸಿದರು.
ವೇಳಾಪಟ್ಟಿಯಂತೆ, ಆರ್‌ಸಿಬಿ ಜನವರಿ 24ರಂದು ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂದಿನ ಪಂದ್ಯ ಆಡಲಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್‌ಸಿಬಿ, ತನ್ನ ಗೆಲುವಿನ ಓಟ ಮುಂದುವರೆಸುವ ಆತ್ಮವಿಶ್ವಾಸದಲ್ಲಿದೆ.

Leave a Reply

Your email address will not be published. Required fields are marked *

error: Content is protected !!