ಉದಯವಾಹಿನಿ, ಕನ್ನಡ ಸೇರಿದಂತೆ ಭಾರತದ ಹಲವು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿರುವ ಹಿರಿಯ ಗಾಯಕಿ ಎಸ್ ಜಾನಕಿ ಅವರ ಪುತ್ರ ಮುರಳಿ ಕೃಷ್ಣ ನಿಧನ ಆಗಿದ್ದಾರೆ. ಮುರಳಿ ಕೃಷ್ಣ ಅವರಿಗೆ 65 ವರ್ಷ ವಯಸ್ಸಾಗಿತ್ತು. ಎಸ್ ಜಾನಕಿ ಅವರ ಏಕೈಕ ಪುತ್ರ ಆಗಿದ್ದರು ಮುರಳಿ ಕೃಷ್ಣ. ಅವರಿಗೆ ಹೃದಯಾಘಾತವಾಗಿ ನಿಧನ ಹೊಂದಿದ್ದಾರೆ. ಹಲವಾರು ಸಿನಿಮಾ ಸೆಲೆಬ್ರಿಟಿಗಳು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಶೋಕ ವ್ಯಕ್ತಪಡಿಸಿದ್ದು, ಜಾನಕಿ ಅವರ ಪರಿಸ್ಥಿತಿಯ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ.
ಎಸ್ ಜಾನಕಿ ಅವರು ಖ್ಯಾತ ಗಾಯಕಿ ಆಗಿದ್ದರೆ ಮುರಳಿ ಕೃಷ್ಣ ಅವರು ಅದ್ಭುತ ಭರತನಾಟ್ಯ ಪಟುವಾಗಿದ್ದರು. ಭರತನಾಟ್ಯ ಪ್ರವೀಣರಾಗಿದ್ದ ಅವರು ಹಲವು ಶೋಗಳನ್ನು ನೀಡಿದ್ದರು. ಕೆಲ ಸಿನಿಮಾಗಳಿಗೆ ಭರತನಾಟ್ಯ ಕೊರಿಯೋಗ್ರಫಿಯನ್ನೂ ಸಹ ಅವರು ಮಾಡಿದ್ದರು. ಭರತ ನಾಟ್ಯ ಮತ್ತು ಕುಚುಪುಡಿ ಪ್ರವೀಣೆಯಾಗಿದ್ದ ಉಮಾ ಎಂಬುವರನ್ನು ವಿವಾಹವಾಗಿದ್ದ ಮುರಳಿಕೃಷ್ಣ, ಇಬ್ಬರು ಹೆಣ್ಣು ಮಕ್ಕಳನ್ನು ಸಹ ಹೊಂದಿದ್ದರು. ಆದರೆ ಉಮಾ ಮತ್ತು ಮುರಳಿ ಕೃಷ್ಣ ವಿಚ್ಛೇದನ ಪಡೆದು ದೂರಾಗಿದ್ದರು.
ಮುರಳಿ ಕೃಷ್ಣ ಅವರು ಕೆಲ ಸಮಯ ಮೈಸೂರಿನಲ್ಲಿಯೇ ವಾಸವಿದ್ದರು ಎನ್ನಲಾಗಿದೆ. ಆ ಸಮಯದಲ್ಲಿ ಎಸ್ ಜಾನಕಿ ಅವರು ಸಹ ಮೈಸೂರಿನಲ್ಲೇ ಇದ್ದರು. ಆದರೆ ಈಗ ಹರಿದಾಡುತ್ತಿರುವ ಸುದ್ದಿಯಂತೆ ಮುರಳಿ ಕೃಷ್ಣ ಅವರು ತಮ್ಮ ತಾಯಿಯ ಮನೆಯಾದ ಹೈದರಾಬಾದ್ನ ಮನೆಯಲ್ಲಿ ಹೃದಯಾಘಾತದಿಂದ ಕೊನೆ ಉಸಿರೆಳೆದಿದ್ದಾರೆ. ಹಲವಾರು ಗಾಯಕರು, ಸಂಗೀತ ಕ್ಷೇತ್ರದ ಸೆಲೆಬ್ರಿಟಿಗಳು ಮುರಳಿ ಕೃಷ್ಣ ಹಠಾತ್ ನಿಧನದ ಬಗ್ಗೆ ಶೋಕ ವ್ಯಕ್ತಪಡಿಸಿದ್ದು, ಜಾನಕಿ ಅವರಿಗೆ ನೋವು ತಡೆದುಕೊಳ್ಳುವ ಶಕ್ತಿ ನೀಡಲೆಂದು ಹಾರೈಸುತ್ತಿದ್ದಾರೆ. ಎಸ್ ಜಾನಕಿ ಅವರಿಗೆ ಈಗ 87 ವರ್ಷ ವಯಸ್ಸಾಗಿದ್ದು, ಈ ವಯಸ್ಸಿನಲ್ಲಿ ಅವರು ಇದ್ದ ಏಕೈಕ ಪುತ್ರನನ್ನು ಕಳೆದುಕೊಂಡು ನೋವಿಗೆ ಜಾರಿದ್ದಾರೆ. ಮುರಳಿ ಕೃಷ್ಣ ಅವರ ಅಂತಿಮ ದರ್ಶನ್ ಮತ್ತು ಅಂತಿಮ ಸಂಸ್ಕಾರದ ಮಾಹಿತಿಗಳು ಇನ್ನಷ್ಟೆ ಹೊರಬೀಳಬೇಕಿದೆ.
