ಉದಯವಾಹಿನಿ, ಕಲಬುರಗಿ: ಬಿಜೆಪಿ ಅವರಿಗೆ ಕಾಂಗ್ರೆಸ್, ಮುಸ್ಲಿಂ ಸೇರಿ ನಾಲ್ಕು ಪದಗಳು ಬಿಟ್ಟರೆ ಬೇರೆ ಮಾತನಾಡೋಕೆ ಬರಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು. ನಗರದಲ್ಲಿ ಮಾತನಾಡಿದ ಅವರು, ದ್ವೇಷ ಭಾಷಣ ಕಾಯ್ದೆಯಡಿ ವಿಕಾಸ್ ಪುತ್ತೂರು ನೋಟಿಸ್ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ಬಿಜೆಪಿಯವರು ಯಾಕೆ ದ್ವೇಷ ಭಾಷಣ ಮಾಡ್ತಾರೆ? ಅವರಿಗೆ ಕಾಂಗ್ರೆಸ್, ಮುಸ್ಲಿಂ ಸೇರಿದಂತೆ ನಾಲ್ಕು ಪದಗಳು ಬಿಟ್ಟು ಬೇರೆ ಮಾತನಾಡೋಕೆ ಬರಲ್ಲ. ಬಿಎನ್ಎಸ್ ಕಾಯ್ದೆಯಲ್ಲೂ ದ್ವೇಷ ಭಾಷಣ ಇದೆ. ಅದರಡಿ ಪೊಲೀಸರು ನೋಟಿಸ್ ನೀಡಿರಬೇಕು ಎಂದು ಬಿಜೆಪಿಗೆ ಟಾಂಗ್ ಕೊಟ್ಟರು.
ಸಿ.ಟಿ.ರವಿ ಅವರಿಂದ ನಾವು ಪಾಠ ಕಲಿಯಬೇಕಿಲ್ಲ. ಇನ್ನು ರಾಜೀವ್ ಗೌಡನನ್ನ ನಾವು ಈಗಾಗಲೇ ಪಕ್ಷದಿಂದ ಉಚ್ಚಾಟನೆ ಮಾಡಿದ್ದೇವೆ. ಆದರೆ, ಪೋಕ್ಸೊ ಕೇಸ್ ಇರುವ ವ್ಯಕ್ತಿಯನ್ನ ವೇದಿಕೆಯಲ್ಲಿ ಕೂರಿಸಿಕೊಳ್ಳುತ್ತಿದ್ದಾರೆ. ಸಿ.ಟಿ.ರವಿ ಅವರು ಯಾಕೆ ಸದನದಲ್ಲಿ ಅವಾಚ್ಯವಾಗಿ ಮಾತನಾಡಿದ ಬಗ್ಗೆ ಯಾಕೆ ವಾಯ್ಸ್ ಸ್ಯಾಂಪಲ್ ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು. ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ. ನಾವು ರಾಜ್ಯ ನೀತಿಗಳನ್ನ ಭಾಷಣದಲ್ಲಿ ಹೇಳಿದ್ದೆವು. ಅದನ್ನೇ ರಾಜ್ಯಪಾಲರು ಓದಿಲ್ಲ. ಅದರಲ್ಲಿ ಕೇಂದ್ರದ ವಿರುದ್ಧ ನಾವು ಯಾವುದೇ ಕೆಟ್ಟ ಶಬ್ದ ಬಳಸಿಲ್ಲ. ಆದರೂ, ರಾಜ್ಯಪಾಲರು ನೀತಿ ನಿಯಮಗಳಿಗೆ ಅವಮಾನ ಮಾಡಿದ್ದಾರೆ ಎಂದು ಬೇಸರ ಹೊರಹಾಕಿದರು.
