ಉದಯವಾಹಿನಿ, ಕೋಲಾರ: ಗುಲಾಬಿ ಈರುಳ್ಳಿ ರಫ್ತಿಗೆ ಮತ್ತೆ ಅನುಮತಿ ನೀಡುವಂತೆ ಕೋರಿ ಸಂಸದ ಎಸ್.ಮುನಿಸ್ವಾಮಿ ನೇತೃತ್ವದ ರೈತರ ತಂಡದ ಮನವಿಗೆ ಕೇಂದ್ರ ವಾಣಿಜ್ಯ ಮತ್ತುಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಸ್ಪಂದಿಸಿದ್ದು, ಬೆಲೆ ಕುಸಿತದಿಂದ ಕಂಗೆಟ್ಟಿದ್ದ ರೈತರ ನೆರವಿಗೆ ಮುಂದಾಗಿದ್ದಾರೆ.
ಸಂಸದ ಎಸ್.ಮುನಿಸ್ವಾಮಿ ನೇತೃತ್ವದ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು ಮತ್ತು ರೈತರ ನಿಯೋಗ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದು, ಕೆಂಪು ಈರುಳ್ಳಿ ರಫ್ತಿನ ಮೇಲೆ ತೆರಿಗೆ ವಿಧಿಸಿರುವ ಕಾರಣ ಉತ್ಪಾದಕ ರೈತರಿಗೆ ತೊಂದರೆಯಾಗಿದೆ, ಬೆಲೆ ಕುಸಿತದಿಂದ ನಷ್ಟಕ್ಕೊಳಗಾಗಿದ್ದು, ಮತ್ತೆ ರಫ್ತಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಸದ ಮುನಿಸ್ವಾಮಿ ಮಾತನಾಡಿ, ಕಳೆದ ಎರಡು ವರ್ಷಗಳ ಹಿಂದೆ ತಮ್ಮ ಮನವಿಗೆ ಸ್ಪಂದಿಸಿದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗುಲಾಬಿ ಈರುಳ್ಳಿ ರಫ್ತಿಗೆ ಅನುಮತಿ ನೀಡಿದ್ದರಿಂದಾಗಿ ಪ್ರತಿ ವರ್ಷ ಸುಮಾರು ೧೦ ಸಾವಿರ ಟನ್ ಇಂಡೋನೀಷಿಯಾ, ಮಲೇಶಿಯಾ, ಥೈಲ್ಯಾಂಡ್ ಮತ್ತಿತರ ದೇಶಗಳಿಗೆ ರಫ್ತಾಗುತ್ತಿತ್ತು ಇದರಿಂದಾಗಿ ಬೆಲೆ ಕುಸಿತದ ಆತಂಕದಿಂದ ರೈತರು ಪಾರಾಗಿದ್ದರು ಎಂದು ಸಚಿವರ ಗಮನಕ್ಕೆ ತಂದರು.
