ಉದಯವಾಹಿನಿ,ನವದೆಹಲಿ: ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಅಧಿಕಾರಿಗಳು ನಿಗದಿಪಡಿಸಿದ ಚುನಾವಣಾ ಕೇಂದ್ರದಲ್ಲಿ ನಿರ್ದಿಷ್ಟ ಮಾದರಿಯಲ್ಲೇ ಅಂಚೆ ಮತ ಚಲಾವಣೆ ಮಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿದೆ.
ಅಂಚೆ ಮತದಾನದ ದುರ್ಬಳಕೆ ತಡೆಯಲು ಕೇಂದ್ರ ಚುನಾವಣಾ ಆಯೋಗ ಪ್ರಸ್ತಾಪಿಸಿದ್ದ ಶಿಫಾರಸ್ಸನ್ನು ಕೇಂದ್ರ ಕಾನೂನು ಸಚಿವಾಲಯ ಅಂಗೀಕರಿಸಿ ಅಧಿಸೂಚನೆ ಹೊರಡಿಸಿದೆ
ನಿಯೋಜಿಸಲಾದ ಅಧಿಕಾರಿಗಳಿಗೆ ಚುನಾವಣೆಯ ದಿನ ರಾತ್ರಿ ೮ರವರೆಗೂ ಮತ ಚಲಾವಣೆಗೆ ಅವಕಾಶವಿದೆ. ಈ ವೇಳೆ ಅದನ್ನು ಮತಗಟ್ಟೆ ಹೊರಗೆ ಒಯ್ದು ನಂತರ ಚುನಾವಣಾಧಿಕಾರಿಗೆ ನೀಡುತ್ತಿದ್ದರು. ಆದರೆ ಹೆಚ್ಚಿನ ಸಮಯ ಮತ ಚೀಟಿ ಅವರ ಬಳಿ ಇದ್ದಷ್ಟೂ ಅವರು ರಾಜಕೀಯ ಪಕ್ಷಗಳ ಅಥವಾ ಅಭ್ಯರ್ಥಿಗಳ ಬೆದರಿಕೆ, ಲಂಚ ಅಥವಾ ಒತ್ತಡಕ್ಕೆ ಒಳಗಾಗಿ ಮತ ಚಲಾವಣೆ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಇದಕ್ಕಾಗಿ ಈ ಬದಲಾವಣೆ ತರಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
