ಉದಯವಾಹಿನಿ, ಬೆಂಗಳೂರು: ಕೇಂದ್ರದ ಮಾಜಿ ಸಚಿವ, ಬಿಜೆಪಿಯ ವಿಜಯಪುರ ಜಿಲ್ಲೆಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ಅತ್ಯಂತ ಕೀಳು ಭಾಷೆ ಬಳಸಿ, ವೈಯಕ್ತಿಕ ನಿಂದನೆ ಮಾಡಿದ್ದು, ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಯತ್ನಾಳ್ ವಿರುದ್ಧ ಎಫ್.ಐ.ಆರ್. ದಾಖಲಾಗಿದ್ದು, ಅವರನ್ನು ಕೂಡಲೇ ಬಂಧಿಸುವಂತೆ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ರವರು ಒತ್ತಾಯಿಸಿದ್ದಾರೆ.
ರಾಹುಲ್ ಗಾಂಧಿಯವರ ಬಗ್ಗೆ ಮಾಧ್ಯಮಗಳು ಪ್ರಶ್ನೆ ಕೇಳಿದ ಸಂದರ್ಭದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರು ನೀಡಿರುವ ಹೇಳಿಕೆಯಲ್ಲಿ ರಾಹುಲ್ ಗಾಂಧಿ ಅವರ ಜನನದ ಬಗ್ಗೆ ಟೀಕೆ ಹಾಗೂ ನಿಂದಿಸಿರುವ ಯತ್ನಾಳ್, ರಾಹುಲ್ ಗಾಂಧಿ ಯಾವ ಜಾತಿಗೆ ಹುಟ್ಟಿದ್ದಾನೆ. ಸಾಬ್ರುಗೆ ಹುಟ್ಟಿದ್ದನೋ, ಕ್ರಿಶ್ಚಿಯನ್ಗೆ ಹುಟ್ಟಿದ್ದನೋ, ಮತ್ತು ಬ್ರಾಹ್ಮಣ ಹಿಂದೂ, ಅವರ ಅಪ್ಪ ಬೇರೆ, ಅವರ ಅಮ್ಮ ಬೇರೆ, ಅವ್ವ ಇಟಲಿ, ಅಪ್ಪ ಮೊಗಲರು, ಮರಿಮೊಮ್ಮಗ ಕಂಟ್ರಿ ಕಂಟ್ರಿ ಪಿಸ್ತೂಲು ಇದ್ದ ಹಾಗೆ ಎಂದು ಜಾತಿ ನಿಂದನೆ ಮಾಡಿದ್ದಾರೆ.
ಧರ್ಮನಿಂದನೆ ಹಾಗೂ ವೈಯಕ್ತಿಕ ನಿಂದನೆ ಮತ್ತು ಕೋಮುಭಾವನೆ ಕೆರಳಿಸುವಂತಹ ಹೇಳಿಕೆ ನೀಡಿ, ಧರ್ಮದ ಹೆಸರುಗಳನ್ನು ಪ್ರಸ್ತಾಪಿಸಿ ಇಸ್ಲಾಂ, ಕ್ರೈಸ್ತ, ಹಿಂದೂ ಹಾಗೂ ಅವರ ಮೂಲ ಕುಟುಂಬದ ಬಗ್ಗೆ ಅವಹೇಳನ ಹಾಗೂ ಪ್ರಚೋಧನಕಾರಿಯಾಗಿ ನಿಂದಿಸಿದ್ದು, ಈ ಹಿನ್ನೆಲೆ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಂಧಿಸುವಂತೆ ಪತ್ರಿಕಾ ಹೇಳಿಕೆ ಮೂಲಕ ಎಸ್. ಮನೋಹರ್ ಒತ್ತಾಯಿಸಿದ್ದಾರೆ.
