ಉದಯವಾಹಿನಿ, ಮೈಸೂರು: ಮಧ್ಯಸ್ಥಿಕೆಗಾರರು ಎಲ್ಲಾ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಾಧ್ಯವಾಗದೆ ಇರಬಹುದು. ಆದರೆ ಅವುಗಳನ್ನು ಇತ್ಯರ್ಥಪಡಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ತಮ್ಮ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರವೀಂದ್ರ ಹೆಗಡೆ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಕರ್ನಾಟಕ ಮಧ್ಯಸ್ಥಿಕಾ ಕೇಂದ್ರ, ಬೆಂಗಳೂರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಶನಿವಾರ ನಡೆದ ಮೈಸೂರು, ಚಾಮರಾಜನಗರ ಮತ್ತು ಕೊಡಗು-ಮಡಿಕೇರಿ ಜಿಲ್ಲೆಯ ಮಧ್ಯಸ್ಥಿಕಗಾರರಿಗೆ ಎರಡು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಧ್ಯಸ್ಥಿಕಗಾರರು ಬಹಳ ಹಿಂದಿನಿಂದ ನೇಮಕವಾಗಿದ್ದಾರೆ. ತುಂಬಾ ಪ್ರಕರಣದಲ್ಲಿ ಅಂಕಿ ಅಂಶ ಗಮನಿಸಿದಾಗ ಇನ್ನು ಸುಧಾರಣೆ ಅಗಬೇಕು. ಬೆಂಗಳೂರಿಗೆ ಸ್ಪರ್ಧೆ ನೀಡುವ ನಿಟ್ಟಿನಲ್ಲಿ ಉದ್ದೇಶ ಈಡೇರಬೇಕು. ಸಮಯ ಪಾಲನೆ ಮಾಡಬೇಕು. ನಿಮ್ಮ ಸಮಯ ಪಾಲನೆ ಹಾಗೂ ಪ್ರಕರಣದ ಫಲಿತಾಂಶಕ್ಕೆ ಜನರು ಅಕರ್ಷಿತರಾಗಬೇಕು. ಪ್ರತಿ ಜಿಲ್ಲೆಗೆ 20 ಮಂದಿ ಆಯ್ಕೆ ಮಾಡಲಾಗಿದೆ. ಈ ತರಬೇತಿ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕೌಟುಂಬಿಕ ನ್ಯಾಯಾಲಯ ಪ್ರಧಾನ ನ್ಯಾಯಾಧೀಶೆ ಸಾವಿತ್ರಿ ಎಸ್.ಕುಜ್ಜಿ ಮಾತನಾಡಿ, ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ಹೆಚ್ಚಿದೆ. ಹೆಚ್ಚಿನ ಪ್ರಮಾಣದಲ್ಲಿ ಮದ್ಯಸ್ಥಿಕೆಗಾರರ ಪಾತ್ರವಹಿಸಬೇಕು. ಎಲ್ಲ ಪ್ರಕರಣ ಒಂದೆ ರೀತಿಯಲ್ಲಿರುವುದಿಲ್ಲ. ಇದನ್ನು ಗಮನಹರಿಸಿ ಪ್ರಕರಣ ಬಗೆಹರಿಸಲು ಮುಂದಾಗಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಲೋಕೇಶ್ ಮಾತನಾಡಿ, ವ್ಯಾಜ್ಯ ಪ್ರಕರಣ ಪರಿಹರಿಸುವಲ್ಲಿ ಮಧ್ಯಸ್ಥಿಕೆಗಾರರ ಪಾತ್ರ ದೊಡ್ಡದು. ಬಹಳ ತಾಳ್ಮೆ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.ಮಧ್ಯಸ್ಥಿಕ ತರಬೇತುದಾರರಾದ ಎಸ್.ಅರ್.ಅನುರಾಧಾ, ಬೃಂದಾ ನಂದಕುಮಾರ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್.ಬಿ.ಜಿ ಸೇರಿದಂತೆ ಹಲವರು ಭಾಗವಹಿಸಿದ್ದರು
