ಉದಯವಾಹಿನಿ, ನವದೆಹಲಿ: ಟೆಸ್ಟ್‌ ಸರಣಿ ಮುಗಿದ ಬೆನ್ನಲ್ಲೇ ಭಾರತ ಪುರುಷರ ಕ್ರಿಕೆಟ್ ತಂಡವು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಈ ವಾರ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆದಾರರು ತಂಡವನ್ನು ಪ್ರಕಟಿಸುವ ನಿರೀಕ್ಷೆಯಿದೆ. ಶುಭಮನ್ ಗಿಲ್ ಭಾರತದ ಏಕದಿನ ತಂಡದ ನಾಯಕರಾಗಿದ್ದು, ಅಕ್ಟೋಬರ್ 4 ರಂದು ಬಿಸಿಸಿಐ ಆಯ್ಕೆದಾರರು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮೂರು ಪಂದ್ಯಗಳ ಸರಣಿಗೆ ಭಾರತದ ತಂಡವನ್ನು ಘೋಷಿಸಿದಾಗ ಶ್ರೇಯಸ್ ಅಯ್ಯರ್ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿತ್ತು. ಆದರೆ ಗಿಲ್ ಮತ್ತು ಅಯ್ಯರ್ ಗಾಯದಿಂದ ಬಳಲುತ್ತಿರುವ ಕಾರಣ ಉಭಯ ಆಟಗಾರರು ಸರಣಿಯಿಂದ ಹೊರಗುಳಿಯುವ ಸಾಧ್ಯತೆ ಇದೆ.
ಅಕ್ಟೋಬರ್ 25 ರಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ಮೂರನೇ ಏಕದಿನ ಪಂದ್ಯದಲ್ಲಿ ಅಯ್ಯರ್ ಫೀಲ್ಡಿಂಗ್‌ ವೇಳೆ ಗಾಯಗೊಂಡರೆ, ಕಳೆದ ವಾರ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ ಪಂದ್ಯದ 2 ನೇ ದಿನದಂದು ಗಿಲ್ ಕುತ್ತಿಗೆಗೆ ಗಾಯ ಮಾಡಿಕೊಂಡರು. ನವೆಂಬರ್ 22 ರಿಂದ 26 ರವರೆಗೆ ಗುವಾಹಟಿಯಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೂ ಅವರ ಲಭ್ಯತೆ ಇನ್ನೂ ಪ್ರಶ್ನಾರ್ಹ ಚಿಹ್ನೆಯಾಗಿದೆ.

2027 ರ ಏಕದಿನ ವಿಶ್ವಕಪ್‌ಗೆ ಮುನ್ನ ಯಾವುದೇ ದೊಡ್ಡ ಏಕದಿನ ಪಂದ್ಯಾವಳಿ ಇಲ್ಲದಿರುವುದರಿಂದ, ಬಿಸಿಸಿಐ ಗಿಲ್ ಮತ್ತು ಅಯ್ಯರ್‌ ಅವರನ್ನು ಅಪಾಯಕ್ಕೆ ಸಿಲುಕಿಸಲು ಬಯಸುವುದಿಲ್ಲ. ಹೀಗಾಗಿ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಅಧಿಕ. ದಕ್ಷಿಣ ಆಫ್ರಿಕಾ ಎ ವಿರುದ್ಧದ ಏಕದಿನ ಸರಣಿಯಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶಬ ತೋರಿದ ಋತುರಾಜ್‌ ಗಾಯಕ್ವಾಡ್‌ಗೂ ಈ ಸರಣಿಯಲ್ಲಿ ಅವಕಾಶ ಸಿಗಲಿದೆ ಎನ್ನಲಾಗಿದೆ. ಕನ್ನಡಿಗ ಕೆ.ಎಲ್‌ ರಾಹುಲ್‌ ಹಂಗಾಮಿ ನಾಯಕನಾಗುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

error: Content is protected !!