ಉದಯವಾಹಿನಿ, ಗುವಾಹಟಿ: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತ ತಂಡ ಕಳಪೆ ಪ್ರದರ್ಶನ ತೋರಿ ಸಂಕಷ್ಟಕ್ಕೆ ಸಿಲುಕಿದೆ. ದಕ್ಷಿಣ ಆಫ್ರಿಕಾ ತನ್ನ ಮೊದಲ ಇನಿಂಗ್ಸ್‌ನಲ್ಲಿ 489 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿದ ಬಳಿಕ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದೆ. ಭಾರತ ತಂಡದ ಬ್ಯಾಟರ್‌ಗಳ ಕಡೆಯಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಬಹುದು ಎನ್ನಲಾಗಿತ್ತು. ಆದರೆ ವಾಸ್ತವವಾಗಿ ಯಶಸ್ವಿ ಜೈಸ್ವಾಲ್‌ ಅವರನ್ನು ಹೊರತುಪಡಿಸಿದರೆ ಉಳಿದೆಲ್ಲರೂ ಸಂಪೂರ್ಣ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು. ಈ ಹಿನ್ನೆಲೆ ಟೀಮ್‌ ಇಂಡಿಯಾ ಮಾಜಿ ಹೆಡ್‌ ಕೋಚ್‌ ರವಿ ಶಾಸ್ತ್ರಿ (ಭಾರತೀಯ ಬ್ಯಾಟರ್‌ಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಂಡದ ಪ್ರದರ್ಶನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಬ್ಯಾಟ್‌ ಮಾಡಲು ಪಿಚ್‌ ಅದ್ಬುತವಾಗಿತ್ತು. ಆದರೆ ಟೀಮ್‌ ಇಂಡಿಯಾ ಬ್ಯಾಟರ್‌ಗಳು ಸುಲಭವಾಗಿ ವಿಕೆಟ್‌ ಒಪ್ಪಿಸಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಈ ಕುರಿತು ಮಾತನಾಡಿರುವ ಭಾರತ ತಂಡದ ಮಾಜಿ ಮುಖ್ಯ ಕೋಚ್‌ ರವಿಶಾಸ್ತ್ರಿ, “ಇದು ಇನ್ನೂ ಉತ್ತಮ ಮೇಲ್ಮೈ. ಇದು 7 ವಿಕೆಟ್‌ಗೆ 142 ರನ್ ಗಳಿಸುವಷ್ಟು ಪಿಚ್ ಅಲ್ಲ. ಸಾಮಾನ್ಯವಾಗಿ ಬ್ಯಾಟಿಂಗ್ ಪಿಚ್‌. ಭಾರತ ಸ್ವಲ್ಪವೂ ಸಂತೋಷಪಡುವುದಿಲ್ಲ. ನೀವು ನಿಮ್ಮ ಕೈಗಳನ್ನು ಮೇಲಕ್ಕೆತ್ತಿ ಇದು ತುಂಬಾ ಸಾಮಾನ್ಯ ಬ್ಯಾಟಿಂಗ್ ಎಂದು ಹೇಳಬೇಕು,” ಎಂದು ಬೇಸರ ಹೊರಹಾಕಿದ್ದಾರೆ.
ತವರಿನಲ್ಲಿ ಗೆಲ್ಲಬಹುದಾಗಿದ್ದ ಈ ಪಂದ್ಯದಲ್ಲಿ ಭಾರತದ ಬ್ಯಾಟರ್‌ಗಳು ನಿರಾಶದಾಯಕ ಪ್ರದರ್ಶನ ತೋರಿದ್ದಾರೆ. ಕೇಶವ್ ಮಹಾರಾಜ್ ಎಸೆದ ಎಸೆತವನ್ನು ಕೆ ಎಲ್ ರಾಹುಲ್ ಸ್ಲಿಪ್‌ನಲ್ಲಿದ್ದ ಫೀಲ್ಡರ್‌ಗೆ ಕ್ಯಾಚ್‌ ಕೊಟ್ಟು ಔಟಾದರು. ಇನ್ನೊಂದು ಬದಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್‌ ಆಕರ್ಷಕ ಅರ್ಧಶತಕ ಬಾರಿಸಿದರೂ, ಮಾರ್ಕೊ ಯೆನ್ಸನ್‌ ಬೌಲಿಂಗ್‌ನಲ್ಲಿ ಶಾರ್ಟ್ ಥರ್ಡ್ ಮ್ಯಾನ್‌ಗೆ ಕ್ಯಾಚ್‌ ಕೊಟ್ಟು ಔಟಾದರು. ಇನ್ನು ಮೊದಲ ಪಂದ್ಯದಲ್ಲಿ ಅವಕಾಶ ವಂಚಿತರಾಗಿ ಮರಳಿ ತಂಡದಲ್ಲಿ ಸ್ಥಾನ ಪಡೆದ ಸಾಯಿ ಸುದರ್ಶನ್‌ ಅವರ ಬ್ಯಾಟ್‌ನಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರಲಿಲ್ಲ. ಬಳಿಕ ಧ್ರುವ್‌ ಜುರೆಲ್‌ ಕೂಡ ಶೂನ್ಯಕ್ಕೆ ಔಟಾಗಿ ಪೆವಿಲಿಯನ್‌ ಕಡೆ ನಡೆದಾಗ ತಂಡ ಸಂಕಷ್ಟಕ್ಕೆ ಸಿಲುಕಿತು.

Leave a Reply

Your email address will not be published. Required fields are marked *

error: Content is protected !!