
ಉದಯವಾಹಿನಿ, ಕಲಿಯುಗದ ಕಾಮಧೇನು ಕಲ್ಪವೃಕ್ಷರೆಂದೆ ಖ್ಯಾತರಾದ ಮಂತ್ರಾಲಯ ಗುರು ಶ್ರೀರಾಘವೇಂದ್ರಸ್ವಾಮಿಗಳಿಗೆ ವಿಶ್ವದಾದ್ಯಂತ ಕೋಟ್ಯಂತರ ಭಕ್ತರಿದ್ದಾರೆ. ರಾಯರ ಕುರಿತು ಸಾಕಷ್ಟು ಭಕ್ತಿಗೀತೆಗಳು ಬಂದಿದೆ. ಆದರೆ ಈವರೆಗೂ ಯಾರು ಹೇಳದ ಹಾಗೂ ತೋರಿಸದ ರಾಯರ ಬಗ್ಗೆಗಿನ ಕೆಲವು ವಿಷಯಗಳನ್ನು “ರಾಯರ ದರ್ಶನ” ಆಲ್ಬಂನಲ್ಲಿ ತೋರಿಸಲಾಗುತ್ತಿದೆ. ಸುಗುಣ ರಘು ಈ ಆಲ್ಬಂ ನಿರ್ಮಾಣ ಮಾಡುತ್ತಿದ್ದಾರೆ. ರಘು ಭಟ್ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಈ ಆಲ್ಬಂ ಸಾಂಗ್ ಕುರಿತು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಹಿರಿಯ ನಟ ಜಗ್ಗೇಶ್ ಮಂತ್ರಾಲಯದ ಮಾಧ್ಯಮ ಪ್ರತಿನಿಧಿ ಶ್ರೀನಿಧಿ ಕರಣಂ, ರಘು ಭಟ್, ಸುಗುಣ ರಘು ಹಾಗು ಗೀತರಚನೆಕಾರ ನಾಗಾರ್ಜುನ ಶರ್ಮ ಉಪಸ್ಥಿತರಿದ್ದರು.
ಮಂತ್ರಾಲಯದ ಪ್ರಸ್ತುತ ಪೀಠಾಧಿಪತಿಗಳಾದ ಸುಬುಧೇಂದ್ರ ತೀರ್ಥರ ಆಶೀರ್ವಾದದೊಂದಿಗೆ ಶ್ರೀಗುರು ರಾಘವೇಂದ್ರಸ್ವಾಮಿಗಳ ದಿವ್ಯ ಚರಿತ್ರೆಯನ್ನು ವಿಶ್ವದಾದ್ಯಂತ ಹರಡುವ ಧ್ಯೇಯದೊಂದಿಗೆ “ರಾಯರ ದರ್ಶನ” ಆಲ್ಬಂ ಸಾಂಗ್ ನಿರ್ಮಾಣವಾಗುತ್ತಿದೆ. ರಾಯರ ಕುರಿತು ಸಾಕಷ್ಟು ಗೀತೆಗಳು ಬಂದಿದೆಯಾದರೂ, ಈವರೆಗೂ ಯಾರು ಹೇಳಿರದ ಹಾಗೂ ತೋರಿಸಿರದ ರಾಯರ ಕುರಿತಾದ ಕೆಲವು ವಿಷಯಗಳು ಈ ಆಲ್ಬಂ ಸಾಂಗ್ ನಲ್ಲಿರಲ್ಲಿದೆ. ಇದೇ ತಿಂಗಳ 23 ರಿಂದ 7 ದಿನಗಳ ಕಾಲ ಮಂತ್ರಾಲಯದಲ್ಲಿ ಶ್ರೀಗಳು ಚಿತ್ರೀಕರಣಕ್ಕಾಗಿ ಸಮಯ ನೀಡಿದ್ದಾರೆ. ರಾಯರ ಭಕ್ತರಾದ ಅನೇಕ ಸೆಲೆಬ್ರಿಟಿ ಕಲಾವಿದರು ಈ ಆಲ್ಬಂ ಸಾಂಗ್ ನಲ್ಲಿ ಅಭಿನಯಿಸಲಿದ್ದಾರೆ. ನಾಗಾರ್ಜುನ ಶರ್ಮ ಅವರು ಗೀತರಚನೆ ಮಾಡುತ್ತಿದ್ದು, ಹೆಸರಾಂತ ಸಂಗೀತ ನಿರ್ದೇಶಕರಾದ ಸಿ.ಆರ್ ಬಾಬಿ ಹಾಗೂ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಲಿದ್ದಾರೆ. ಫೆಬ್ರವರಿಯಲ್ಲಿ ಮಂತ್ರಾಲಯದಲ್ಲೇ ಅದ್ಧೂರಿಯಾಗಿ “ರಾಯರ ದರ್ಶನ” ಆಲ್ಬಂ ಸಾಂಗ್ ಅನಾವರಣವಾಗಲಿದೆ. ಇಂದಿನ ಪತ್ರಿಕಾಗೋಷ್ಠಿಗೆ ಆಗಮಿಸಿರುವ ರಾಯರ ಪರಮಭಕ್ತರಾದ ಜಗ್ಗೇಶ್ ಅವರಿಗೆ ಹಾಗೂ ಶ್ರೀನಿಧಿ ಕರಣಂ ಅವರಿಗೆ ಧನ್ಯವಾದ ಎಂದರು ರಘು ಭಟ್.
