ಉದಯವಾಹಿನಿ, ಅಹಮದಾಬಾದ್: ದೇವದತ್ ಪಡಿಕ್ಕಲ್ ಹಾಗೂ ಕರುಣ್ ನಾಯರ್ ಅವರ ಶತಕಗಳ ಮೂಲಕ ಕರ್ನಾಟಕ ತಂಡ, ಕೇರಳ ಎದುರು 8 ವಿಕೆಟ್ಗಳ ಭರ್ಜರಿ ಗೆಲುವು ಪಡೆದಿದೆ. ಆ ಮೂಲಕ 2025-26ರ ಸಾಲಿನ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಸತತ ಎರಡನೇ ಜಯ ಪಡೆದಿದ್ದು, ಎ ಗ್ರೂಪ್ನ ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. 285 ರನ್ಗಳ ಚೇಸಿಂಗ್ನಲ್ಲಿ 130 ಎಸೆತಗಳಲ್ಲಿ ಅಜೇಯ 130 ರನ್ ಬಾರಿಸಿ ಕರ್ನಾಟಕ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಕರುಣ್ ನಾಯರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕೇರಳ ನೀಡಿದ್ದ 285 ರನ್ಗಳ ಗುರಿಯನ್ನು ಹಿಂಬಾಲಿಸಿದ ಕರ್ನಾಟಕ ತಂಡ, ಒಂದು ರನ್ ಇರುವಾಗಲೇ ನಾಯಕ ಮಯಂಕ್ ಅಗರ್ವಾಲ್ ಅವರ ವಿಕೆಟ್ ಅನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ಆದರೆ, ಎರಡನೇ ವಿಕೆಟ್ಗೆ ಜೊತೆಯಾದ ದೇವದತ್ ಪಡಿಕ್ಕಲ್ ಹಾಗೂ ಕರುಣ್ ನಾಯರ್ ತಲಾ ಶತಕಗಳನ್ನು ಸಿಡಿಸುವ ಜೊತೆಗೆ ಎರಡನೇ ವಿಕೆಟ್ಗೆ 222 ರನ್ಗಳ ಜೊತೆಯಾಟವನ್ನು ಆಡುವ ಮೂಲಕ ಕರ್ನಾಟಕ ತಂಡವನ್ನು ಗೆಲ್ಲಿಸಿದರು. ಕರ್ನಾಟಕ ತಂಡ 48.2 ಓವರ್ಗಳಿಗೆ ಎರಡು ವಿಕೆಟ್ ನಷ್ಟಕ್ಕೆ 285 ರನ್ ಗಳಿಸಿ ಗೆಲುವು ಪಡೆಯಿತು.
ಪಡಿಕ್ಕಲ್-ಕರುಣ್ ಅಬ್ಬರದ ಶತಕ: ಕರ್ನಾಟಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಕರುಣ್ ನಾಯರ್ ಹಾಗೂ ದೇವದತ್ ಪಡಿಕ್ಕಲ್ ತಲಾ ಶತಕಗಳನ್ನು ಬಾರಿಸಿದರು. ಮೊದಲ ಸುತ್ತಿನ ಪಂದ್ಯದಲ್ಲಿಯೂ ಶತಕ ಸಿಡಿಸಿದ್ದ ದೇವದತ್ ಪಡಿಕ್ಕಲ್, 137 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ 12 ಬೌಂಡರಿಗಳೊಂದಿಗೆ 124 ರನ್ಗಳನ್ನು ಬಾರಿಸಿದರು. ಆ ಮೂಲಕ ಈ ಟೂರ್ನಿಯಲ್ಲಿ ಸತತ ಎರಡನೇ ಶತಕವನ್ನು ಬಾರಿಸಿದರು. ಇನ್ನು ಇವರ ಜೊತೆ ಮತ್ತೊಂದು ತುದಿಯಲ್ಲಿ ದ್ವಿಶತಕದ ಜೊತೆಯಾಟವನ್ನು ಆಡಿದ್ದ ಕರುಣ್ ನಾಯರ್ ಅವರು ಕೂಡ ಬ್ಯಾಟಿಂಗ್ನಲ್ಲಿ ಮಿಂಚಿದರು. ಅವರು ಆಡಿದ 130 ಎಸೆತಗಳಲ್ಲಿ 14 ಬೌಂಡರಿಗಳೊಂದಿಗೆ 130 ರನ್ಗಳನ್ನು ಗಳಿಸಿದರು. ಆ ಮೂಲಕ ಕೊನೆಯವರೆಗೂ ಕ್ರೀಸ್ನಲ್ಲಿ ನಿಂತು ತಂಡವನ್ನು ಗೆಲ್ಲಿಸಿದರು. ಸ್ಮರಣ್ ರವಿಚಂದ್ರನ್ 16 ಎಸೆತಗಳಲ್ಲಿ 25 ರನ್ಗಳನ್ನು ಗಳಿಸಿದರು.
