ಉದಯವಾಹಿನಿ, ಅಹಮದಾಬಾದ್,: ಹಾಲಿ ವಿಶ್ವ ಚಾಂಪಿಯನ್ ಎಂಬ ಪಟ್ಟವನ್ನು ಹೊತ್ತುಕೊಂಡಿರುವ ಟೀಂ ಇಂಡಿಯಾ ಈಗ ಮತ್ತೊಂದು ವಿಶ್ವಕಪ್ ಟೋಫ್ರಿ ಗೆಲ್ಲುವ ಸಮರಕ್ಕೆ ಸಜ್ಜಾಗಿದೆ. ಭಾನುವಾರ(ಮಾ.8) ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಪ್ರಶಸ್ತಿ ಕಾಳಗ ನಡೆಸಲಿದೆ. ಈ ಪಂದ್ಯಕ್ಕೆ ಭಾರತ ತಂಡದ ಆಡುವ ಬಳಗ ಹೇಗಿರಲಿದೆ( ಯಾರು ತಂಡದಿಂದ ಹೊರಗುಳಿಯಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಟೂರ್ನಿ ಆರಂಭಕ್ಕೂ ಮುನ್ನ ಪ್ರಚಂಡ ಫಾರ್ಮ್ನಲ್ಲಿದ್ದ ಅಭಿಷೇಕ್ ಶರ್ಮಾ, ಮತ್ತು ವರುಣ್ ಚಕ್ರವರ್ತಿ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇರಿಸಲಾಗಿತ್ತು. ಆದರೆ ಈ ನಿರೀಕ್ಷೆ ಇದುವರೆಗೂ ಹುಸಿಯಾಗುತ್ತಲೇ ಬಂದಿದೆ. ಅಭಿಷೇಕ್ ಶರ್ಮ ಬ್ಯಾಟಿಂಗ್ ಮರೆತವರಂತೆ ಆಡುತ್ತಿದ್ದಾರೆ. ಲೀಗ್ ಪಂದ್ಯದಲ್ಲಿ ಮೂರು ಶೂನ್ಯ ಸುತ್ತಿದ್ದ ಅವರು ಇದುವರೆಗೂ 20 ಪ್ಲಸ್ ಮೊತ್ತ ಬಾರಿಸಿಲ್ಲ.
ಮತ್ತೊಂದೆಡೆ ಮಿಸ್ಟರಿ ಸ್ಪಿನ್ನರ್ ವರಣ್ ಚಕ್ರವರ್ತಿ ಸ್ಪಿನ್ ಮೋಡಿ ನಡೆಯತ್ತಿಲ್ಲ. ಒಂದೆರಡು ಪಂದ್ಯ ಬಿಟ್ಟರೆ ಉಳಿದ ಪಂದ್ಯದಲ್ಲಿ ವಿಕೆಟ್ ಲೆಸ್ ಜತೆಗೆ ದುಬಾರಿಯಾಗಿದ್ದರು. ಸೂಪರ್ 8 ಹಂತದಿಂದ ಕೇವಲ 4 ವಿಕೆಟ್ಗಳನ್ನು ಮಾತ್ರ ಪಡೆದಿದ್ದಾರೆ ಮತ್ತು ಪ್ರತಿ ಓವರ್ಗೆ 11.62 ರನ್ಗಳನ್ನು ಬಿಟ್ಟುಕೊಡುತ್ತಿದ್ದಾರೆ. ಹೀಗಾಗಿ ಭಾರತ ಅಂತಿಮ ಪಂದ್ಯಕ್ಕೆ ತನ್ನ ಆಡುವ ಬಳಗದಲ್ಲಿ ಬದಲಾವಣೆ ಬಗ್ಗೆ ಚಿಂತಿಸುವ ಅಗತ್ಯವಿದೆ. ಅಭಿಷೇಕ್ ಶರ್ಮ ವೈಫಲ್ಯ ಕಂಡರೂ ಅವರನ್ನು ಫೈನಲ್ ಪಂದ್ಯದಿಂದ ಕೈಬಿಡುವ ಸಾಧ್ಯತೆ ಕಡಿಮೆ. ಆದರೆ ಬೌಲಿಂಗ್ ವಿಭಾಗದಲ್ಲಿ ಮಾತ್ರ ಬದಲಾವಣೆ ಖಚಿತ.
