ಉದಯವಾಹಿನಿ, ಭಾರತ ತಂಡದ ಮಾಜಿ ನಾಯಕ, ಮಾಜಿ ತರಬೇತುದಾರ ಕನ್ನಡಿಗ ರಾಹುಲ್ ದ್ರಾವಿಡ್ ಅವರಿಗೆ ಕರ್ನಲ್ ಸಿ.ಕೆ. ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ ನೀಡುವುದಾಗಿ ಬಿಸಿಸಿಐ ದೃಢಪಡಿಸಿದೆ. ರಾಹುಲ್ ದ್ರಾವಿಡ್ ಅವರು ಕೇವಲ ಆಟಗಾರನಾಗಿ ಮಾತ್ರವಲ್ಲದೆ, ತಂಡದ ಅಗತ್ಯತೆಗೆ ತಕ್ಕಂತೆ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ನಾಯಕನಾಗಿ, ವಿಕೆಟ್ ಕೀಪರ್ ಆಗಿ ಅನೇಕ ಟೂರ್ನಿಗಳನ್ನು ಗೆಲ್ಲಿಸಿದ್ದಾರೆ. ಆ ಕಾರಣಕ್ಕಾಗಿಯೇ ಅವರಿಗೆ ‘ದಿ ವಾಲ್’ ಎಂಬ ಬಿರುದು ಲಭಿಸಿದೆ.
ರಾಹುಲ್ ದ್ರಾವಿಡ್ ಅವರು ತಮ್ಮ ನಿವೃತ್ತಿಯ ಬಳಿಕ ಕಿರಿಯರ ಹಾಗೂ ಹಿರಿಯರ ಕ್ರಿಕೆಟ್ ತಂಡದ ಮಾರ್ಗದರ್ಶಕರಾಗಿ ಅನೇಕ ಯುವ ಆಟಗಾರರನ್ನು ಭಾರತ ತಂಡದಲ್ಲಿ ಮಿಂಚುವಂತೆ ಮಾಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಭಾರತ ತಂಡವು 2024ರ ಟಿ20 ವಿಶ್ವಕಪ್ ಗೆದ್ದಿತ್ತು.
ಹಾಗಾಗಿ, ಅವರು ಕ್ರಿಕೆಟ್ ಲೋಕಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಸಿ.ಕೆ. ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿಯನ್ನು ಬಿಸಿಸಿಐ ಘೋಷಣೆ ಮಾಡಿದೆ. ಮಾರ್ಚ್ 15ರಂದು ದೆಹಲಿಯಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ಪ್ರಶಸ್ತಿಗಳ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
