ಉದಯವಾಹಿನಿ, ಅಫ್ಘಾನಿಸ್ತಾನ ತಂಡವನ್ನು ಬಿಟ್ಟು ತಮ್ಮ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವಂತೆ ಭಾರತ ಹಾಗೂ ಆಸ್ಟ್ರೇಲಿಯಾ ಆಫರ್ ನೀಡಿದ್ದವು. ಜೊತೆಗೆ ಪೌರತ್ವ ನೀಡುವುದಾಗಿ ಹೇಳಿದ್ದವು. ಆದರೆ ನಾನು ತಿರಸ್ಕರಿಸಿದೆ ಎಂದು ಅಫ್ಘಾನಿಸ್ತಾನ ಕ್ರಿಕೆಟಿಗ ರಶೀದ್ ಖಾನ್ ಹೇಳಿದ್ದಾರೆ.
ತಮ್ಮ ಪುಸ್ತಕ `ರಶೀದ್ ಖಾನ್: ಫ್ರಮ್ ಸ್ಟ್ರೀಟ್ಸ್ ಟು ಸ್ಟಾರ್ಡಮ್’ನಲ್ಲಿ ಇದನ್ನು ಬಹಿರಂಗಪಡಿಸಿದ್ದಾರೆ. ಭಾರತೀಯ ಕ್ರಿಕೆಟ್ನ ಹಿರಿಯ ವ್ಯಕ್ತಿಯೊಬ್ಬರು ಅಫ್ಘಾನಿಸ್ತಾನ ತಂಡವನ್ನು ಬಿಟ್ಟು ತಮ್ಮ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವಂತೆ ಆಫರ್ ನೀಡಿದ್ದರು. ಜೊತೆಗೆ ಪೌರತ್ವ ನೀಡುವುದಾಗಿ ತಿಳಿಸಿದ್ದರು. ಆದರೆ ನಾನು ನನ್ನ ದೇಶಕ್ಕೆ, ಅಫ್ಘಾನಿಸ್ತಾನಕ್ಕೆ ಬದ್ಧವಾಗಿರಲು ಆಯ್ಕೆ ಮಾಡಿಕೊಂಡೆ ಎಂದು ತಿಳಿಸಿದ್ದಾರೆ.
2023ರ ಐಪಿಎಲ್ (IPL) ವೇಳೆ ನಡೆದ ಘಟನೆಯೊಂದನ್ನು ವಿವರಿಸುತ್ತಾ ಹೇಳಿದ ಅವರು, ಆ ದಿನ ಭಾರತೀಯ ಕ್ರಿಕೆಟ್ನ ಹಿರಿಯ ವ್ಯಕ್ತಿಯೊಬ್ಬರು ನನ್ನನ್ನು ಭೇಟಿಯಾಗಲು ಬಯಸಿದ್ದಾರೆಂದು ತಂಡದ ಅಧಿಕಾರಿಯೊಬ್ಬರು ತಿಳಿಸಿದ್ದರು. ನಾನು ಅವರ ಬಳಿಗೆ ಹೋಗಿ ಸ್ವಾಗತಿಸಿದೆ. ಆಗ ಅವರು ನಿಮ್ಮ ದೇಶದಲ್ಲಿ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಬನ್ನಿ ಭಾರತದಲ್ಲಿಯೇ ಇರಿ. ನಾವು ನಿಮಗೆ ಭಾರತೀಯ ದಾಖಲೆಗಳನ್ನು ನೀಡುತ್ತೇವೆ, ಇಲ್ಲಿಯೇ ಕ್ರಿಕೆಟ್ ಆಡಿಸುತ್ತೇವೆ ಎಂದು ಹೇಳಿದ್ದರು. ಆದರೆ ನಾನು ಮುಗುಳ್ನಕ್ಕು, ತುಂಬಾ ಧನ್ಯವಾದಗಳು. ನಾನು ನನ್ನ ದೇಶ ಅಫ್ಘಾನಿಸ್ತಾನಕ್ಕಾಗಿ ಆಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದೆ ಎಂದು ಹೇಳಿದ್ದಾರೆ.
