
ಉದಯವಾಹಿನಿ,ಕೊಲಂಬೊ: ಕಳೆದ ವರ್ಷದಂತೆಯೇ ಶ್ರೀಲಂಕಾದಲ್ಲಿ ಮತ್ತೆ ಸಾರ್ವಜನಿಕ ಅಶಾಂತಿ ಸೃಷ್ಟಿಸಲು ಕೆಲ ಗುಂಪುಗಳು ಪ್ರಯತ್ನಿಸುತ್ತಿವೆ. ಈ ಬಗ್ಗೆ ಗುಪ್ತಚರ ಇಲಾಖೆ ವರದಿ ನೀಡಿದೆ ಎಂದು ಶ್ರೀಲಂಕಾದ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಮಂಗಳವಾರ ಸಂಪುಟ ಸಭೆಯಲ್ಲಿ ವಿವರಿಸಿದ್ದಾರೆ. ‘ಕೃಷಿಗೆ ನೀರಿನ ಕೊರತೆ ಎದುರಾಗಿದೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ದೇಶದಲ್ಲಿ ಸಮಸ್ಯೆ ಸೃಷ್ಟಿಸಲು ಪ್ರಯತ್ನಿಸುತ್ತಿವೆ’ ಎಂದು ಕ್ಯಾಬಿನೆಟ್ ವಕ್ತಾರ ಮತ್ತು ಸಚಿವ ಬಂಡುಲ ಗುಣವರ್ಧನ ಸಂಪುಟ ಸಭೆ ಬಳಿಕ ಹೇಳಿದರು.’ಜಲವಿದ್ಯುತ್ ಉತ್ಪಾದಿಸಲು ಮೀಸಲಾಗಿರುವ ಸಮನಲವೆವಾ ಜಲಾಶಯದಿಂದ ಕೃಷಿಗೆ ನೀರು ಬಿಡುವಂತೆ ಒತ್ತಾಯಿಸಿ ನೈಋತ್ಯ ಉಡವಾಲವೆಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಅಪೇಕ್ಷೆಯಂತೆ ಕೃಷಿಗೆ ನೀರು ಬಿಟ್ಟರೆ ದೇಶ ವಿದ್ಯುತ್ ಕೊರತೆ ಎದುರಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
