ಉದಯವಾಹಿನಿ, ಕೋಲಾರ : ಪ್ರಜಾಕವಿ ಗದ್ದರ್ ನೆನಪಿನಲ್ಲಿ ೧೯೬ನೇ ಹುಣ್ಣಿಮೆ ಹಾಡು ಕೋಲಾರದ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ದಿನಾಂಕ ೩೧.೮.೨೩ ರಂದು ಇತ್ತೀಚೆಗೆ ಅಗಲಿದ ಪ್ರಜಾಕವಿ ಗದ್ದರ್ ನೆನಪಿನಲ್ಲಿ ೧೯೬ನೇ ಹುಣ್ಣಿಮೆ ಹಾಡು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಲಕ್ಷ್ಮೀಪತಿ ಕೋಲಾರ ರಚನೆಯ ಮರೆತದಾರಿ ನಾಟಕ ಪ್ರದರ್ಶನ ನಡೆಯಿತು.ಮದನಪಲ್ಲಿಯ ಶಿವಪ್ರಸಾದ್ ಎನ್ನುವ ಜಾನಪದ ಕಲಾವಿದ ಗದ್ದರ್ ಅವರು ಹುಟ್ಟು, ಉದ್ಯೋಗ, ಹೋರಾಟದ ಬಗ್ಗೆ ವಿವರಿಸಿದರು.
ತೆಲಂಗಾಣದ ತುಪ್ರಾನ್ ನಲ್ಲಿ ೧೯೪೯ರಲ್ಲಿ ಜನಿಸಿದ ವಿಠ್ಠಲ್ ರಾವ್ ವಿದ್ಯಾವಂತರಾಗಿ, ಕೆನೆರಾ ಬ್ಯಾಂಕ್ ಉದ್ಯೋಗಿಯಾಗಿದ್ದವರು. ಉನ್ನತ ಮಟ್ಟದ ಜೀವನ ರೂಪಿಸಿಕೊಳ್ಳಬಹುದಿತ್ತು. ಆದರೆ, ಶೋಷಿತರಿಗೆ ಆಗುತ್ತಿದ್ದ ಅನ್ಯಾಯಗಳ ವಿರುದ್ಧ ಹೋರಾಟಗಳು ಮಾಡುವ ಅಗತ್ಯವಿದೆ ಎನ್ನಿಸಿ ವಿಭಿನ್ನ ರೀತಿಯ ಹೋರಾಟಗಳು ಮಾಡಿದವರು. ಅವರಲ್ಲಿದ್ದ ಕವಿತ್ವ,ಜಾನಪದ ಶೈಲಿ ವಿಶಿಷ್ಟವಾದದ್ದು ಆದ್ದರಿಂದಲೇ ಗದ್ದರ್ ಅಂತ ಪ್ರಸಿದ್ಧಿಯಾದರು. ಜನ ದನಿಯಾಗಿ ಹೊರಹೊಮ್ಮಿದರು. ನಾವು ಇವತ್ತು ಅವರ ಹಾದಿಯಲ್ಲೇ ನಡೆಯುತ್ತಿದ್ದೇವೆ ಎಂದರು.
