ಉದಯವಾಹಿನಿ, ನವದೆಹಲಿ: ಕಳೆದ ೧೦ ವರ್ಷಗಳಲ್ಲಿ ಭಯೋತ್ಪಾದನೆ, ಉಗ್ರಗಾಮಿ ಚಟುವಟಿಗೆ ನಕ್ಸಲಿಸಂ, ಜನಾಂಗೀಯ ಹಿಂಸಾಚಾರಗಳು ಗರಿಷ್ಠಮಟ್ಟದಿಂದ ಶೇ. ೬೫ ರಷ್ಟು ಇಳಿಕೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಅವರು ಪೊಲೀಸ್ ಸಂಸ್ಮರಣಾ ದಿನದ ಅಂಗವಾಗಿ ನವದೆಹಲಿಯ ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಹುತಾತ್ಮರಿಗೆ ನಮನ ಸಲ್ಲಿಸಿ ಮಾತನಾಡಿದರು. ಸ್ವಾತಂತ್ರ್ಯಾ ನಂತರ ದೇಶದ ಆಂತರಿಕ ಭದ್ರತೆ, ಗಡಿ ಭದ್ರತೆಗಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ೩೬,೨೫೦ ಪೊಲೀಸರಿಗೆ ಗೌರವ ಸಲ್ಲಿಸಿದ ಗೃಹ ಸಚಿವರು, ಇಂದು ಭಾರತ ವಿಶ್ವದ ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿ ಹೊಂದುತ್ತಿದೆ. ಹುತಾತ್ಮರ ತ್ಯಾಗವೇ ಪ್ರಗತಿಯ ಅಡಿಪಾಯ, ಅವರ ತ್ಯಾಗವನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
ಜಾಗರೂಕ ಪೊಲೀಸ್ ವ್ಯವಸ್ಥೆ ಇಲ್ಲದೆ ದೇಶದ ಆಂತರಿಕ ಭದ್ರತೆ ಅಥವಾ ಗಡಿ ಭದ್ರತೆ ಸಾಧ್ಯವಿಲ್ಲ, ದೇಶಕ್ಕೆ ಸೇವೆ ಸಲ್ಲಿಸುವ ಸಿಬ್ಬಂದಿಗಳಲ್ಲಿ ಕರ್ತವ್ಯ ಕಠಿಣವಿದೆ. ಹಗಲು=ರಾತ್ರಿ ಚಳಿ=ಮಳೆ, ಬಿಸಿಲು=ಗಾಳಿಯನ್ನದೆ ಕರ್ತವ್ಯ ಪ್ರಜ್ಞೆ ಮೆರೆಯಬೇಕಿದೆ. ಭಯೋತ್ಪಾದಕರ ವಿರುದ್ಧ ಹೋರಾಡುವುದು ಅಪರಾಧಗಳನ್ನು ನಿಲ್ಲಿಸುವುದು, ನಾಗರಿಕರ ರಕ್ಷಣೆ ನಮ್ಮ ಪೊಲೀಸರ ಬಹುದೊಡ್ಡ ಜವಾಬ್ದಾರಿ ಎಂದ ಸಚಿವರು, ದೇಶ ರಕ್ಷಣೆಗಾಗಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಎಂದು ಹುತಾತ್ಮರನ್ನು ಸ್ಮರಿಸಿದರು.
