ಉದಯವಾಹಿನಿ, ನೆಲಮಂಗಲ: ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ 56 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.ಜಯಂತ್ ಅಲಿಯಾಸ್ ಬ್ಯಾಟರಿ ಜಯಂತ ಹಾಗೂ ಯತೀಶ್ ಬಂಧಿತ ಆರೋಪಿಗಳು. ನೆಲಮಂಗಲದ ವಾಜರಹಳ್ಳಿ ಜಾರ್ಜ್ ಲೇಔಟ್ನಲ್ಲಿರುವ ಎಂಜಿನಿಯರ್ ಒಬ್ಬರ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಆರೋಪಿಗಳು 650 ಗ್ರಾಂ ಚಿನ್ನಾಭರಣ ಕದ್ದಿದ್ದರು. ಕಳ್ಳರು ಬೈಕ್ನಲ್ಲಿ ಓಡಾಡಿದ್ದ ದೃಶ್ಯಗಳು ಅಲ್ಲಿಯೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಸದ್ಯ ನೆಲಮಂಗಲ ಟೌನ್ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಆರೋಪಿಗಳಿಂದ 343 ಗ್ರಾಂ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ಕದ್ದ ಚಿನ್ನಾಭರಣವನ್ನು ಈಗಾಗಲೇ ಕೆಲಕಡೆ ಮಾರಾಟ ಮಾಡಿರುವುದಾಗಿ ತಿಳಿದು ಬಂದಿದೆ. ತನಿಖೆ ನಡೆಸಿದ ಪೊಲೀಸರು ಇಬ್ಬರನ್ನೂ ಜೈಲಿಗಟ್ಟಿದ್ದಾರೆ. ಈ ಹಿಂದೆ 25ರಿಂದ 26ಕ್ಕೂ ಹೆಚ್ಚು ಕೇಸ್ಗಳಲ್ಲಿ ಭಾಗಿಯಾಗಿದ್ದ ಈ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಮನೆಯ ಮಾಲೀಕರು ಆಗ್ರಹಿಸಿದ್ದಾರೆ.
