ಉದಯವಾಹಿನಿ, ತಿರುಪತಿ: ಕಳೆದ ಒಂದು ವರ್ಷದಿಂದ ತಿರುಪತಿಯ ಲಡ್ಡು ವಿಚಾರ ಚರ್ಚೆಯಲ್ಲಿದ್ದರೆ ಇದೀಗ ಮತ್ತೊಂದು ಹಗರಣ ಲ್ಲರನ್ನೂ ಬೆಚ್ಚಿ ಬೀಳುವಂತೆ ಮಾಡಿದೆ. ತಿರುಪತಿ ಲಡ್ಡಿನಲ್ಲಿ ಕಲಬೆರಕೆಯ ತುಪ್ಪ ಬಳಕೆ ವಿಚಾರವಾಗಿ ತನಿಖೆ ನಡೆಯುತ್ತಿರುವ ಮಧ್ಯೆಯೇ ಇದೀಗ ತಿರುಮಲ ತಿರುಪತಿ ದೇವಸ್ಥಾನಗಳ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. ದೇವಾಲಯದ ವಿವಿಧ ಆಚರಣೆಗಳಿಗೆ ಬಳಸುವ ರೇಷ್ಮೆ ಉಡುಪುಗಳ ಖರೀದಿ ವಿಚಾರದಲ್ಲಿ ಬಹುದೊಡ್ಡ ಹಗರಣವಾಗಿದೆ ಎಂಬುದು ವಿಜಿಲೆನ್ಸ್ ವಿಚಾರಣೆಯಲ್ಲಿ ತಿಳಿದು ಬಂದಿದೆ. ಇದು ಇಂದು, ನಿನ್ನೆ ನಡೆದಿರುವ ಹಗರಣವಲ್ಲ ಹತ್ತು ವರ್ಷಗಳ ನಡೆದಿರುವ ಹಗರಣವಾಗಿದೆ.
ತಿರುಪತಿ ದೇವಸ್ಥಾನದ ಲಡ್ಡುಗಳಲ್ಲಿ ಕಲಬೆರಕೆ ತುಪ್ಪ ಬಳಕೆ ವಿಚಾರ ಕಳೆದ ಒಂದು ವರ್ಷಗಳಿಂದ ತನಿಖೆಯಲ್ಲಿದೆ. ಈ ನಡುವೆಯೇ ಇದೀಗ ಮತ್ತೊಂದು ಪ್ರಮುಖ ಹಗರಣ ಬೆಳಕಿಗೆ ಬಂದಿದೆ. ದೇವಾಲಯದ ವಿವಿಧ ಆಚರಣೆಗಳಿಗಾಗಿ ಬಳಸುವ ರೇಷ್ಮೆ ಉಡುಪುಗಳ ಖರೀದಿಯಲ್ಲಿ ಭಾರಿ ಪ್ರಮಾಣದ ಹಗರಣ ನಡೆದಿದ್ದು, ಇದರಿಂದ ದೇವಸ್ಥಾನದ ಬೊಕ್ಕಸಕ್ಕೆ ಬರೋಬ್ಬರಿ 54 ಕೋಟಿ ರೂ. ನಷ್ಟವಾಗಿದೆ ಎಂದು ಆರೋಪಿಸಲಾಗಿದೆ.
ತಿರುಮಲ ತಿರುಪತಿ ದೇವಸ್ಥಾನಗಳು ಕಳಪೆ ಗುಣಮಟ್ಟದ ಉಡುಪುಗಳನ್ನು ಖರೀದಿಗೆ ಹೆಚ್ಚಿನ ಹಣವನ್ನು ಪೋಲು ಮಾಡಿದೆ. ಟೆಂಡರ್ ಗುತ್ತಿಗೆದಾರನೊಬ್ಬ 100 ರೂ.ಗಿಂತ ಕಡಿಮೆ ಬೆಲೆಯ ಉಡುಪುಗಳನ್ನು ಟಿಟಿಡಿಗೆ 1,400 ರೂ. ಗೆ ಮಾರಾಟ ಮಾಡಿರುವುದನ್ನು ವಿಜಿಲೆನ್ಸ್ ತಂಡವು ಪತ್ತೆ ಮಾಡಿದೆ. ಬೆಲೆ ಮತ್ತು ಗುಣಮಟ್ಟದಲ್ಲಿ ವ್ಯತ್ಯಾಸವನ್ನು ಪತ್ತೆ ಮಾಡಿರುವ ವಿಜಿಲೆನ್ಸ್ ತಂಡ ಈ ಬಗ್ಗೆ ವಿವರವಾದ ತನಿಖೆಗೆ ಮುಂದಾಗಿದೆ.
ವಿಆರ್ ಎಸ್ ಎಕ್ಸ್ಪೋರ್ಟ್ಸ್ ಹಲವಾರು ವರ್ಷಗಳಿಂದ ಮಾಡಿರುವ ಒಪ್ಪಂದದ ಪ್ರಕಾರವಾಗಿ ದೇವಾಲಯಕ್ಕೆ ನಿಜವಾದ ರೇಷ್ಮೆಯಂತೆ ಕಾಣುವ ಪಾಲಿಸ್ಟರ್ ಬಟ್ಟೆಯನ್ನು ಪೂರೈಕೆ ಮಾಡಿದೆ. ಇದನ್ನು ದೇವಾಲಯದ ಪ್ರಮುಖ ಆಚರಣೆಗಾಗಿ ಪೂರೈಕೆ ಮಾಡಲಾಗಿದ್ದು ಇದನ್ನು ರೇಷ್ಮೆಯಿಂದ ಮಾಡಲಾಗಿಲ್ಲ ಎಂದು ಪ್ರಯೋಗಾಲಯದ ವರದಿಯಿಂದ ತಿಳಿದು ಬಂದಿದೆ.
