
ಉದಯವಾಹಿನಿ,ಚಿನ್ನೈ : ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಪಕ್ಷದ ಯುವ ಘಟಕ ರಾಜ್ಯದಲ್ಲಿ ನೀಟ್ ರದ್ದುಗೊಳಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಉಪವಾಸ ಸತ್ಯಾಗ್ರಹ ನಡೆಸಿತ್ತು. ಮುಂದಿನ ಚುನಾವಣೆಯಲ್ಲಿ ಭಾರತ ಮೈತ್ರಿಕೂಟ ಗೆದ್ದು ಅಧಿಕಾರ ಹಿಡಿದರೆ ರಾಜ್ಯದಲ್ಲಿ ನೀಟ್ ಪರೀಕ್ಷೆ ರದ್ದು ಪಡಿಸಲಾಗುವುದು ಎಂದು ತಮಿಳುನಾಡು ಸಿಎಂ ಸ್ಟಾಲಿನ್ ಉಪವಾಸ ಸತ್ಯಾಗ್ರಹ ನಿರತ ಕಾರ್ಯಕರ್ತರಿಗೆ ಸ್ಪಷ್ಟಪಡಿಸಿದರು. ಈ ಒಂದು ದಿನದ ಉಪವಾಸ ಸತ್ಯಾಗ್ರಹದ ನೇತೃತ್ವವನ್ನು ಸಚಿವ ಉದಯನಿಧಿ ಸ್ಟಾಲಿನ್ ವಹಿಸಿದ್ದರು. ಈ ಉಪವಾಸ ಸತ್ಯಾಗ್ರಹ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸ್ಟಾಲಿನ್, ನೀಟ್ ರದ್ದತಿಗಾಗಿ ಡಿಎಂಕೆಯ ಹೋರಾಟವು ರಾಜಕೀಯ ಪ್ರೇರಿತವಲ್ಲ, ಆದರೆ ಸಾಮಾಜಿಕ ಸಮಾನತೆ ಶಿಕ್ಷಣವನ್ನು ಬಯಸುವ ತಮಿಳುನಾಡಿನ ಜನರ ಬೇಡಿಕೆಯಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಉಪವಾಸ ಸತ್ಯಾಗ್ರಹ ಯಶಸ್ವಿಗೊಳಿಸಿದವರಿಗೆ ಸಿಎಂ ಅಭಿನಂದನೆ ಸಲ್ಲಿಸಿದರು. ಉದಯನಿಧಿ ಸ್ಟಾಲಿನ್ ಮಾತನಾಡಿ ನೀಟ್ ರದ್ದುಗೊಳಿಸಬೇಕು ಇಲ್ಲವೇ ತಮಿಳುನಾಡಿಗೆ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದರು. ಇದೇ ಬೇಡಿಕೆಯೊಂದಿಗೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಿಎಂ ಪಳನಿಸ್ವಾಮಿ ಅವರು ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರ ಮನೆ ಮುಂದೆ ಧರಣಿ ನಡೆಸುವಂತೆ ಮನವಿ ಮಾಡಿದರು. ಆದರೆ, ಮಹಾರಾಷ್ಟ್ರ ಮತ್ತು ಕರ್ನಾಟಕದ ನಂತರ ತಮಿಳುನಾಡಿನಿಂದ ನೀಟ್-ಯುಜಿ ಪರೀಕ್ಷೆಗೆ ಅತಿ ಹೆಚ್ಚು ಅರ್ಜಿಗಳು ಬಂದಿವೆ ಎಂಬುದು ಗಮನಾರ್ಹ.
